ದಾವಣಗೆರೆ:
ಕೆ.ಪಿ.ಆರ್ . ಶ್ರೀರಕ್ಷಾ ಟ್ರಸ್ಟ್ (ರಿ ), ಎಡು ಏಷ್ಯಾ ಸಮೂಹ ಶಾಲೆ, ಅನುದಾನಮ್ ಚಾರಿಟೇಬಲ್ ಟ್ರಸ್ಟ್ (ರಿ ) ಮತ್ತು ಶ್ರೀನಿಧಿ ಫೈನ್ಯಾನ್ಸಿಯಲ್ ಸರ್ವೀಸಸ್ ಸಹಯೋಗದಲ್ಲಿ ಮಂಗಳೂರಿನ ದೇರಳಕಟ್ಟೆಯ ಕೆ. ಎಸ್ . ಹೆಗ್ಡೆ ಆಸ್ಪತ್ರೆಯು ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಇಲ್ಲಿನ ರಿಂಗ್ ರಸ್ತೆಯಲ್ಲಿರುವ ಎಡು ಏಷ್ಯಾ ಸಮೂಹ ಶಾಲೆಯ ಆವರಣದಲ್ಲಿ ನಡೆಯಿತು.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆದ ಈ ಸೂಪರ್ ಸ್ಪೆಷ್ಯಾಲಿಟಿ ಅರೋಗ್ಯ ತಪಾಸಣೆ ಶಿಬಿರದಲ್ಲಿ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಅಂಕೋಲಜಿ ವಿಭಾಗದ ಕ್ಯಾನ್ಸರ್ ಸರ್ಜನ್ ಡಾ| ವಿನಯ್ ಕುಮಾರ್ ಜಿ., ನರಶಸ್ತ್ರಚಿಕಿತ್ಸೆ ವಿಭಾಗದ ನ್ಯೂರೋ ಸರ್ಜನ್ ಡಾ| ಶಿವಕುಮಾರ್, ಸಾಮಾನ್ಯ ವೈದ್ಯಕೀಯ ವಿಭಾಗದ ಮೆಡಿಸಿನ್ ತಜ್ಞರು ಡಾ| ರೋಹಿನ್ ದುಬ್ಬಾಳ್, ಶಸ್ತ್ರಚಿಕಿತ್ಸೆ ವಿಭಾಗದ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಅಭಿಜಿತ್ ಶೆಟ್ಟಿ, ಎಲುಬು ಮತ್ತು ಮೂಳೆರೋಗ ತಜ್ಞರಾದ ಡಾ| ವಿಕ್ರಂ ಶೆಟ್ಟಿ, ಕೀಹೋಲ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಸಿದ್ಧಾರ್ಥ್ ಶೆಟ್ಟಿ, ಬೆನ್ನುಮೂಳೆ ತಜ್ಞರಾದ ಡಾ| ಸಂತೋಷ್ ಬಾಬು ಭಾಗವಹಿಸಿದ್ದರು.
ಸುಮಾರು 350ಕ್ಕಿಂತಲೂ ಅಧಿಕ ಜನರು ಈ ಉಚಿತ ವೈದ್ಯಕೀಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡಿದ್ದು, ಅಗತ್ಯವಿದ್ದವರಿಗೆ ರಕ್ತಪರೀಕ್ಷೆ ಹಾಗೂ ಈ.ಸಿ.ಜಿ ತಪಾಸಣೆಗಳನ್ನು ಮಾಡಲಾಯಿತು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು. ಸುಮಾರು 80 ಮಂದಿಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
