ನಾಯಕನಹಟ್ಟಿ :
ಇಂದಿನ ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಶಿಕ್ಷಣ ಪಡೆದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ಎತ್ತಿನಹಟ್ಟಿ ಗೌಡ್ರು ಅಭಿಮಾನಿ ಬಳಗದ ಕಾರ್ಯಾದರ್ಶಿ ಜಿ.ಟಿ.ದೇವರಾಜ್ ಹೇಳಿದರು.
ಹೋಬಳಿಯ ಭೀಮಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 73ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ನಾಯಕನಹಟ್ಟಿ ಹೋಬಳಿಯು ನಿರಂತರವಾದ ಬರಗಾಲದಿಂದ ತತ್ತರಿಸಿ ಹೋಗಿದೆ ಈ ಭಾಗದಲ್ಲಿ ಮಳೆಯ ಕೃಷಿ ಬೇಸಾಯ ಪದ್ಧತಿ ಹೊರತುಪಡಿಸಿ ಬೇರೆ ಯಾವುದೇ ನೀರಾವರಿ ಯೋಜನೆಗಳಾಗಲಿ, ಕೈಗಾರಿಕೆಗಳಾಗಲಿ ಇಲ್ಲ. ಇದರಿಂದ ಈ ಭಾಗದಲ್ಲಿ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ಇಂತಹ ಹಲವು ಸಮಸ್ಯೆಗಳ ಮಧ್ಯೆ ಇಂದಿನ ಆಧುನಿಕ ಯುಗದಲ್ಲಿ ಪ್ರಗತಿ ಸಾಧಿಸಲು ಇರುವ ಏಕೈಕ ಮಾರ್ಗವೇ ಶಿಕ್ಷಣ. ಗ್ರಾಮೀಣ ಭಾಗದ ಮಕ್ಕಳು ಯಾವುದೇ ಕ್ಲಿಷ್ಟಕರ ಪರಿಸ್ಥಿತಿ ಎದುರಾದರೂ ಶಿಕ್ಷಣದಿಂದ ವಿಮುಖರಾಗಬಾರದು. ಶಿಕ್ಷಕರ ಮಾರ್ಗದರ್ಶನದ ಮೂಲಕ ಗಂಭೀರವಾಗಿ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಪ್ರತಿ ಹಂತದಲ್ಲೂ ಉತ್ತಮವಾದ ಫಲಿತಾಂಶವನ್ನು ಪಡೆಯಬೇಕು ಹಾಗಾದಾಗ ಮಾತ್ರ ಅಸಂಖ್ಯಾತ ಅವಕಾಶಗಳು ದೊರೆಯುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇವೇಳೆ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಶೇಷಾದ್ರಿನಾಯಕ, ಮುಖ್ಯಶಿಕ್ಷಕ ಎಸ್.ಎನ್.ಚಿದಾನಂದಪ್ಪ, ಸಹ ಶಿಕ್ಷಕರಾದ ಜಿ.ಕೆ.ಭೀಮಪ್ಪ, ಜೆ.ಎಸ್.ಅನಿತ, ಗೀರ್ವಾಣಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ, ಸದಸ್ಯ ಓಬಳೇಶ್, ಗ್ರಾಮಸ್ಥರಾದ ನಾಗರಾಜ, ಹನುಮಣ್ಣ, ನಾಗರತ್ನಮ್ಮ ಇದ್ದರು.
