ಕೊಪ್ಪಳ:
ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ಧವಾಗಿದ್ದು, ಪಕ್ಷದ ಬೃಹತ್ ಸಮಾವೇಶ ನಡೆಸಿ ಘೋಷಣೆ ಮಾಡುತ್ತೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನ ಪಂಪಾಸರೋವರದಲ್ಲಿ ಹನುಮ ಮಾಲೆ ಧರಿಸಿ ಮಾತನಾಡಿದ ಜನಾರ್ಧನ ರೆಡ್ಡಿ, ಲೋಕಸಭಾ ಚುನಾವಣೆಗೆ ನಾನಾಗಲಿ, ನನ್ನ ಕುಟುಂಬದವರಾಗಲಿ ಸ್ಪರ್ಧೆ ಮಾಡುವುದಿಲ್ಲ. ಹೊಸ ಅಭ್ಯರ್ಥಿಗಳು ಈಗಾಗಲೇ ರೆಡಿ ಆಗಿದ್ದಾರೆ. ಅವರ ಹೆಸರುಗಳನ್ನು ಕೊಪ್ಪಳದ ಸಮಾವೇಶದಲ್ಲಿ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆ ಜನವರಿ 11 ರಂದು ಕೊಪ್ಪಳದಲ್ಲಿ 6 ಜಿಲ್ಲೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 4 ರಿಂದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇನೆ. ಅವರನ್ನು ಗೆಲ್ಲಿಸಲು ಹಗಲು ರಾತ್ರಿ ಕೆಲಸ ಮಾಡುತ್ತೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೀಗಾಗಿ ಕೆಆರ್ ಪಿಪಿ ತನ್ನ ಇತಿಮಿತಿಗಳಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡುತ್ತದೆ. ಬೇರೆ ಪಕ್ಷಗಳ ಜೊತೆಗೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಯಾರು ಏನೇ ಮಾಡಿದರೂ ನನ್ನ ನಿರ್ಧಾರ ದೃಢವಾಗಿದೆ. ಕೆಆರ್ ಪಿಪಿ ಸ್ವತಃ ಬಲದ ಮೇಲೆ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ರೆಡ್ಡಿ ತಿಳಿಸಿದ್ದಾರೆ.
ಬೇರೆ ಪಕ್ಷಗಳ ಜೊತೆಗೆ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವೊಂದು ಪಕ್ಷದ ಜೊತೆಗೆ ಸೇರುವ ಪ್ರಶ್ನೆ ಬರುವುದಿಲ್ಲ. ಸ್ವತಃ ಬಲದ ಮೇಲೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಲೋಕಸಭಾ ಚುನಾವಣೆಗೆ ನಾನಾಗಲಿ ನನ್ನ ಕುಟುಂಬದವರಾಗಲಿ ಸ್ಪರ್ಧೆ ಮಾಡುವುದಿಲ್ಲ. ಹೊಸ ಅಭ್ಯರ್ಥಿಗಳು ಈಗಾಗಲೇ ರೆಡಿ ಆಗಿದ್ದಾರೆ. ಅವರ ಹೆಸರುಗಳನ್ನು ಕೊಪ್ಪಳದ ಸಮಾವೇಶದಲ್ಲಿ ಘೋಷಣೆ ಮಾಡುತ್ತೇನೆ. ಅಂದು ಕನಿಷ್ಟ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಕಳೆದ ವರ್ಷ ಹನುಮಮಾಲಾ ಜಯಂತಿಗೆ ಪಾದಾರ್ಪಣೆ ಮಾಡಿದ್ದೆ. ಹನುಮಮಾಲಾ ಧರಿಸುವ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಿಳಿಸಿದ್ದೆ. ಈಗ ಒಂದು ವರ್ಷ ಕಳೆದಿದೆ. ಭಗವಂತನ ಕೃಪೆ ಇದೆ. ಹನುಮಂತನ ಪಾದ ಮುಟ್ಟಿ ಗಂಗಾವತಿ ಶಾಸಕನಾಗಲು ಬೇಡಿಕೊಂಡಿದ್ದೆ. ನನ್ನ ಮೊದಲನೇ ಬೇಡಿಕೆ ಶಾಸಕನಾಗುವುದು ಈಡೇರಿದೆ. ಕಿಷ್ಕಿಂದ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
![](https://prajapragathi.com/wp-content/uploads/2023/12/gali-janardhan-reddy.gif)