ಬೆಂಗಳೂರು :
ಪ್ರತಿ ವರ್ಷ ಗಣೇಶ ಹಬ್ಬದ ಪ್ರಯುಕ್ತ ಒಂದಿಲ್ಲೊಂದು ಹೊಸತನದ ಕಾರ್ಯಕ್ರಮ ಹಮ್ಮಿಕೊಳ್ಳುವ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ನಿಂದ ಈ ಬಾರಿ ಗಣೇಶೋತ್ಸವವನ್ನು ನಾಣ್ಯ ಮತ್ತು ನೋಟುಗಳಿಂದ ಅಲಂಕರಿಸಿ ವೈಭವದಿಂದ ವಿಭಿನ್ನವಾಗಿ ಆಚರಿಸಲಾಗುತ್ತಿದೆ.
ಗುರುಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾರನ್ನು ತೆಂಗಿನ ಕಾಯಿ, ಬಾದಾಮಿ, ಖರ್ಜೂರ, ಹಣ್ಣುಗಳಿಂದ ಸಿಂಗರಿಸಿ ಗಮನ ಸೆಳೆದಿದ್ದ ಟ್ರಸ್ಟ್, ಈ ಬಾರಿ ಗಣೇಶೋತ್ಸಕ್ಕೆ ಸ್ಪರ್ಷ ನೀಡುತ್ತಿದೆ.
ಐವತ್ತು ಲಕ್ಷ ರೂಪಾಯಿ ಮೊತ್ತದ ನಾಣ್ಯಗಳು, ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳಿಂದ ಅಲಂಕರಿಸುವ ಪ್ರಕ್ರಿಯೆ ಒಂದು ವಾರದ ಹಿಂದೆಯೇ ಆರಂಭವಾಗಿದೆ. ೧೫೦ ಕ್ಕೂ ಹೆಚ್ಚು ಜನರ ತಂಡ ಹಬ್ಬಕ್ಕೂ ಹದಿನೈದು ದಿನಗಳ ಹಿಂದಿನಿಂದಲೇ ನೋಟುಗಳ ಅಲಂಕಾರದಲ್ಲಿ ನಿರತವಾಗಿದೆ. ವಿಕ್ರಂ ಲ್ಯಾಂಡರ್, ಚಂದ್ರಯಾನ – ೩, ಜೈ ಕರ್ನಾಟಕ, ಜೈ ಜವಾನ್-ಜೈ ಕಿಸಾನ್, ಮೇರಾ ಭಾರತ್ ಮಹಾನ್ ಥೀಮ್ ಅಳವಡಿಸಿಕೊಂಡಿದ್ದು ಎಲ್ಲರ ಗಮನ ಸೆಳೆಯಲು ಸಿದ್ಧವಾಗುತ್ತಿವೆ.
ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್ ರಾಜ್ ಮಾತನಾಡಿ, ಐದು, ಹತ್ತು, ಇಪ್ಪತ್ತು ರೂಪಾಯಿ ಮೊತ್ತದ ತಲಾ ಒಂದೂವರೆ ಲಕ್ಷ ನಾಣ್ಯಗಳು, ಐದು, ಹತ್ತು, ಇಪ್ಪತ್ತು, ೧೦೦, ೫೦೦ ರೂ. ಮೊತ್ತದ ನೋಟುಗಳಿಂದ ಗಣೇಶ ಮೂರ್ತಿಯನ್ನು ಸಿಂಗರಿಸಲಾಗುತ್ತಿದೆ. ನೋಟುಗಳ ಮೌಲ್ಯ ಇನ್ನೂ ನಿಗದಿ ಮಾಡಿಲ್ಲ. ಭಕ್ತಾದಿಗಳು ಗಣೇಶನ ಅಲಂಕಾರಕ್ಕಾಗಿ ಲಕ್ಷಾಂತರ ರೂ. ಮೊತ್ತದ ನೋಟುಗಳನ್ನು ಪ್ರತಿನಿತ್ಯ ಕಾಣಿಕೆಯಾಗಿ ನೀಡುತ್ತಿದ್ದಾರೆ. ಹಬ್ಬದ ವೇಳೆಗೆ ನೋಟುಗಳ ಮೌಲ್ಯ ತಿಳಿಯಲಿದೆ ಎಂದರು. ಸೆಪ್ಟ್ಟೆಂಬರ್ ೧೮ ರಂದು ಬೆಳಗ್ಗೆಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
