ನವದೆಹಲಿ:
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ನಿರಾಯಾಸವಾಗಿ ಗೆದ್ದ ಟೀಮ್ ಇಂಡಿಯಾ, ಶುಕ್ರವಾರದಿಂದ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಪಂದ್ಯಕ್ಕೂ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ್ ದೆಹಲಿಯ ರಾಜಿಂದರ್ ನಗರದ ತನ್ನ ನಿವಾಸದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಬುಧವಾರ ರಾತ್ರಿ ಔತಣಕೂಟ ಏರ್ಪಡಿಸಿದ್ದರು.
ಆಟಗಾರರಿಗೆ ಮನೆಯ ಗಾರ್ಡನ್ನಲ್ಲಿ ಡಿನ್ನರ್ ವ್ಯವಸ್ಥೆ ಮಾಡಲಾಗಿತ್ತು. ಗಂಭೀರ್ ಕೋಚ್ ಆದ ಬಳಿಕ ಅವರ ತವರೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಒಟ್ಟಾರೆ ಎರಡನೇ ಪಂದ್ಯ. ಕಳೆದ ವರ್ಷ ಅಕ್ಟೋಬರ್ನಲ್ಲೇ ಭಾರತ ತಂಡ ದೆಹಲಿಯಲ್ಲಿ ಬಾಂಗ್ಲಾ ವಿರುದ್ಧ ಟಿ20 ಪಂದ್ಯವೊಂದನ್ನು ಆಡಿತ್ತು. ಆಟಗಾರರು ಗಂಭೀರ್ ಮನೆಯಿಂದ ಔತಣಕೂಟ ಮುಗಿಸಿ ಹೊರಬರುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಂಡೀಸ್ ಟೆಸ್ಟ್ ಮುಗಿದ ತಕ್ಷಣ ಆಟಗಾರರು ಮತ್ತು ಕೋಚ್ ಗಂಭೀರ್ ದೆಹಲಿಯಿಂದಲೇ ಆಸೀಸ್ಗೆ ಪ್ರಯಾಣ ಬೆಳೆಸಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಎರಡೂವರೆ ದಿನಗಳಲ್ಲೇ ಮುಗಿದ ಕಾರಣ, ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈ ಪಂದ್ಯ ಕೊನೇ ದಿನದವರೆಗೂ ಸಾಗುವ ನಿರೀಕ್ಷೆ ಹರಡಿದೆ.
ಪಂದ್ಯದ ಮೊದಲ ಎರಡು ದಿನ ಬ್ಯಾಟಿಂಗ್ ಸುಲಭವಾಗಿರಲಿದ್ದು, ಮೂರನೇ ದಿನದ ನಂತರವೇ ಚೆಂಡು ತಿರುವು ಪಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಕಪ್ಪು ಮಣ್ಣಿನ ಪಿಚ್ಗಳು ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿರುತ್ತವೆ. ಹೀಗಾಗಿ ಬ್ಯಾಟರ್ಗಳು ಮೊದಲ 2 ದಿನ ಮೇಲುಗೈ ಸಾಧಿಸಬಹುದು








