ಮುಂಬಯಿ:
ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟರ್ ಸುನೀಲ್ ಗವಾಸ್ಕರ್ ವಿರುದ್ಧ ನಾಯಕ ರೋಹಿತ್ ಶರ್ಮ ಅವರು ಬಿಸಿಸಿಐಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಗವಾಸ್ಕರ್ ಭಾರತೀಯ ಆಟಗಾರರ ಬಗ್ಗೆ ನಿರಂತರ ಟೀಕೆಗಳನ್ನು ಮಾಡಿದ್ದರು. ಇದನ್ನು ಖಂಡಿಸಿ ರೋಹಿತ್ ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ನಡೆದಿದ್ದ ಬಿಸಿಸಿಐ ಪದಾಧಿಕಾರಿಗಳ ಜತೆಗೆ ನಡೆದ ಪರಾಮರ್ಶೆ ಸಭೆಯ ವೇಳೆ ರೋಹಿತ್, ತನ್ನ ಮತ್ತು ತಂಡದ ಬಗ್ಗೆ ಗವಾಸ್ಕರ್ ಅತಿಯಾದ ನಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದರು. ಅದು ನನ್ನ ಮತ್ತು ಆಟಗಾರರ ಮೇಲೆ ಒತ್ತಡ ಹೇರಿತು ಎಂದು ದೂರಿದ್ದಾರೆ ಎನ್ನಲಾಗಿದೆ.
ಆಸೀಸ್ನಲ್ಲಿ ವೈಫಲ್ಯ ಕಂಡಿದ್ದ ರೋಹಿತ್ ಮತ್ತೆ ಫಾರ್ಮ್ ಕಂಡುಕೊಳ್ಳುವ ಸಲುವಾಗಿ 10 ವರ್ಷದ ಬಳಿಕ ದೇಶೀಯ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿಳಿದಿದ್ದರು. ಆದರೆ ಇಲ್ಲಿಯೂ ಒಂದಕಿಗೆ ಸೀಮಿತರಾಗಿ ವೈಫಲ್ಯ ಕಂಡಿದ್ದರು.
ಜ.30ರಂದು ನಡೆಯುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಇದೇ ಕಾರಣಕ್ಕೆ ಅವರು ಮಾಜಿ ಬ್ಯಾಟರ್ ಸಂಜಯ್ ಬಂಗಾರ್ ಅವರ ಮಾರ್ಗದರ್ಶನದಲ್ಲಿ ಕಠಿಣ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕುತ್ತಿಗೆ ನೋವಿನಿಂದಾಗಿ ಅಲಭ್ಯರಾಗಿದ್ದರು. ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಪಂದ್ಯವಾಡಿದ್ದು 2012ರಲ್ಲಿ. ಇದೀಗ ಅವರು ರೈಲ್ವೇಸ್ ವಿರುದ್ಧ ಕಣಕ್ಕಿಳಿದರೆ 13 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಆಡಿದಂತಾಗುತ್ತದೆ.
ತವರಿನ ನ್ಯೂಜಿಲ್ಯಾಂಡ್ ಮತ್ತು ಆಸೀಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಇದೇ ಕಾರಣದಿಂದ ಬಿಸಿಸಿಐ ಹಿರಿಯ ಆಟಗಾರರು ಕೂಡ ದೇಶೀಯ ಪಂದ್ಯವನ್ನಾಡುವುದು ಕಡ್ಡಾಯ ಎಂಬ ನಿಯಮ ಜಾರಿಗೆ ತಂದಿದೆ.
