ಮೈಸೂರು:
ಬಿಜೆಪಿಗೆ ಕಿಕ್ ಇಲ್ಲ ಬ್ಯಾಕು ಇಲ್ಲ, ಅವರೇನು ಸ್ಮಾರ್ಟ್ ಮೀಟರ್ ಬಗ್ಗೆ ಮಾತನಾಡುವುದು, ಅವರು ಎಲ್ಲಾ ವಿಚಾರದಲ್ಲೂ ಇಂತಹದೇ ಆರೋಪಗಳನ್ನು ಮಾಡುತ್ತಾರೆ ಎಂದು ಸಚಿವ ಕೆ.ಜೆ . ಜಾರ್ಜ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೆಂಗಳೂರಿನಲ್ಲಿ ಸ್ಟೀಲ್ ಬ್ರೀಡ್ಜ್ ವಿಚಾರದಲ್ಲಿ ಇದೇ ರೀತಿ ಆರೋಪ ಮಾಡಿದರು ಆದರೆ ಇವತ್ತು ಬ್ರಿಡ್ಜ್ ಆಗದೇ ಜನ ಕಷ್ಟ ಅನುಭವಿಸುತ್ತಿದ್ದಾರೆ, ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಕೆಲವರು ಕೋರ್ಟ್ಗೆ ಹೋಗಿದ್ದಾರೆ.
ನಾವು ನ್ಯಾಯಲದಲ್ಲಿ ಅದಕ್ಕೆ ಉತ್ತರ ಕೊಡುತ್ತೇವೆ, ಅವರು ಕೋರ್ಟ್ಗೆ ಹೋಗಿದ್ದು ಒಳ್ಳೆಯದು ಬಿಡಿ, ಇನ್ನೂ ಯಾರು ಯಾರು ಎಲ್ಲೆಲ್ಲಿಗೆ ದೂರು ಕೊಡುತ್ತಾರೆ ಕೊಡಲಿ, ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ, ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಯಾವ ಕಿಕ್ ಬ್ಯಾಕ್ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಕೆ ರವಿ ಕೇಸ್ನಲ್ಲಿ ನನ್ನ ಮೇಲೆ ಇಂತಹ ಆರೋಪ ಮಾಡಿದ್ರು, ಆಮೇಲೆ ಸಿಬಿಐ ರಿಪೋರ್ಟ್ ನಲ್ಲಿ ಏನು ವರದಿ ಬಂತು ಹೇಳಿ. ನನ್ನ ಪಾತ್ರವೇ ಇಲ್ಲ ಎಂಬುದು ಬಂತು, ಆಗ ನನ್ನನ್ನ ವಿಚಾರಣೆಗೆ ಕರೆಯಲೇ ಇಲ್ಲ, ಈಗ ಬಂದಿರುವ ಆರೋಪ ಕೂಡ ಅಂತಹದೆ. ಪ್ರತಿ ಭಾರಿ ಬಿಜೆಪಿ ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡುತ್ತೆ ಗೊತ್ತಿಲ್ಲ, ನಾನೇನು ಸಾಫ್ಟ್ ಲೀಡರ್ ಅಲ್ಲ, ಭಾಷೆಯನ್ನ ಸೌಜನ್ಯವಾಗಿಡುತ್ತೇನೆ ಅಷ್ಟೇ, ಹಲವು ಇಲಾಖೆಗಳಲ್ಲಿ ಕೆಲಸ ಮಾಡಿದ್ದೇನೆ, ನಾನು ಸಾಫ್ಟ್ ಆಗಿದ್ದರೆ ಇವೆಲ್ಲಾ ಆಗುತ್ತಿತ್ತ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯಗೆ ಜನ ಬೆಂಬಲ ಇದೆ, 5 ವರ್ಷವೂ ಇರಬಹುದು 10 ವರ್ಷವೂ ಇರಬಹುದು, ನೀವೇ ನವೆಂಬರ್ ಎಂದು ಟೈಂ ಫಿಕ್ಸ್ ಮಾಡಿದ್ದೀರಾ. ಈಗ ಜೂನ್ ಇದೆ ನವೆಂಬರ್ ಬರಲಿ ಅವತ್ತು ಮಾತನಾಡುತ್ತೇನೆ ಎಂದರು. ಹೈ ಕಮಾಂಡ್ ಹಾಗೂ ಶಾಸಕರ ಬೆಂಬಲ ಸಿದ್ದರಾಮಯ್ಯ ಹಾಗೂ ನಮ್ಮ ಸರ್ಕಾರದ ಮೇಲೆ ಇದೆ. ಯಾವ ವಿಚಾರ ಯಾವಾಗ ತೀರ್ಮಾನ ಮಾಡಬೇಕೆಂದು ಹೈ ಕಮಾಂಡ್ಗೆ ಗೊತ್ತಿದೆ.
ಹೈ ಕಮಾಂಡ್ ವಿಚಾರವನ್ನ ನಾನು ಹೇಗೆ ಮಾತನಾಡಲಿ. 5 ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ಈ ವಿಚಾರದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿ ನನ್ನನ್ನು ಸಿಲುಕಿಸುವ ಯತ್ನ ಮಾಡಬೇಡಿ. ನೀವು ಪ್ರಶ್ನೆ ಕೇಳಿದ್ದೀರಾ ನಾನು ಉತ್ತರ ಕೊಟ್ಟಿದ್ದೇನೆ. ಪ್ರಶ್ನೆ ನಿಮ್ಮದು ಉತ್ತರ ನನ್ನದು, ನನ್ನದೇ ಪ್ರಶ್ನೆ ನನ್ನದೇ ಉತ್ತರ ಎಂಬ ರೀತಿಯಲ್ಲಿ ತೋರಿಸಿಬೇಡಿ ಎಂದು ಹೇಳಿದರು.
