ಜಾತಿ ವ್ಯವಸ್ಥೆ, ಅಂತರ್ಗತ ತಾರತಮ್ಯವನ್ನು ದೇವರು ಸೃಷ್ಟಿಸಿಲ್ಲ : ಸಿದ್ದರಾಮಯ್ಯ

ಮೈಸೂರು:

   ಜಾತಿ ವ್ಯವಸ್ಥೆ, ಅಂತರ್ಗತ ತಾರತಮ್ಯವನ್ನು ದೇವರು ಸೃಷ್ಟಿಸಿಲ್ಲ. ಕೆಲವು ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಸೃಷ್ಟಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.

   ನಂಜನಗೂಡಿನಲ್ಲಿ ದಲಿತ ಮತ್ತು ಸಾಮಾಜಿಕ ಹೋರಾಟಗಾರರು ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಮತ್ತು ನಮ್ಮ ನಡಿಗೆ ಸಂವಿಧಾನದ ಕಡೆಗೆ ಅಭಿಯಾನ ಉದ್ಘಾಟಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ, ಸನ್ಮಾನಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

    ಮನುಷ್ಯ ತಾರತಮ್ಯವನ್ನು ಆಚರಿಸುವ ಚಾತುರ್ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ದೇವರು ಸೃಷ್ಟಿಸಿದ್ದಲ್ಲ. ತಮ್ಮ ಸ್ವಾರ್ಥಕ್ಕಾಗಿ ಕೆಲವು ಮನುಷ್ಯರೇ ಸೃಷ್ಟಿಸಿದ್ದು. ಈ ತಾರತಮ್ಯವನ್ನು ಅಳಿಸುವುದೇ ಅಂಬೇಡ್ಕರ್ ಅವರ ಹೋರಾಟದ ಉದ್ದೇಶವಾಗಿತ್ತು. ಈ ಉದ್ದೇಶಕ್ಕಾಗಿ ಹೋರಾಟ ಮುಂದುವರೆಸುವುದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

   ಅಂಬೇಡ್ಕರ್ ಅವರು ಈ ರೀತಿಯ ಸಂವಿಧಾನ ಕೊಡದೇ ಹೋಗಿದ್ದರೆ ನಾನು ಮುಖ್ಯಮಂತ್ರಿ ಆಗಲು ಸಾಧ್ಯವೇ ಆಗುತ್ತಿರಲಿಲ್ಲ. ಮೋದಿಯವರು ಪ್ರಧಾನಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಸ್ವಾಭಿಮಾನದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

   ಸಾವಿರಾರು ವರ್ಷಗಳದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಶೂದ್ರ, ದಲಿತರು ಮತ್ತು ಮಹಿಳೆಯರಿಗೆ ಅಂಬೇಡ್ಕರ್ ಅವರ ಸಂವಿಧಾನ ಶಿಕ್ಷಣದ ಹಕ್ಕನ್ನು ಒದಗಿಸಿಕೊಟ್ಟಿತು. ಅದಕ್ಕೂ ಮೊದಲು ಮೇಲು ಜಾತಿಯ ಮಹಿಳೆಯರಿಗೂ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ ಎಂದರು.

   ಗುತ್ತಿಗೆಯಲ್ಲಿ ದಲಿತ ಸಮುದಾಯಕ್ಕೆ ಮೀಸಲಾತಿ ತಂದಿದ್ದು, ದಲಿತ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಅಭಿವೃದ್ಧಿ ಆಯವ್ಯಯದಲ್ಲಿ ಹಣ ದಲಿತರ ಅಭಿವೃದ್ಧಿಗೆ ಮೀಸಲಿಟ್ಟು ಕಾಯ್ದೆ ಮಾಡಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾತ್ರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಇದು ಜಾರಿಯಲ್ಲಿಲ್ಲ. ಸಂವಿಧಾನ ಬದಲಾವಣೆಯ ಕೂಗನ್ನು ಕೆಲವರು ಹಾಕುತ್ತಿದ್ದಾರೆ. ಸಂವಿಧಾನ ಬದಲಾದರೆ ನಂತರದ ಧಾರುಣ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link