KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

ಚಾಮರಾಜನಗರ:

     ಕೆಎಸ್‌ಆರ್‌ಟಿಸಿ (KSRTC) ಚಾಲಕರ ಹೊರಗುತ್ತಿಗೆ ಹುದ್ದೆಯ ನೇಮಕಾತಿಯಲ್ಲೂ ಕೂಡ ಗೋಲ್ಮಾಲ್ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಚಾಲಕನೊಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.

    ಕೆಎಸ್‌ಆರ್‌ಟಿಸಿ ಚಾಲಕರ ಹುದ್ದೆ ಹೊರಗುತ್ತಿಗೆ ನೌಕರಿಯಲ್ಲಿ ಲಂಚ ಕೊಟ್ಟವರಿಗೆ ಕೆಲಸ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬಗ್ಗೆ ಚಾಲಕನೊಬ್ಬ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹಣ ಕೊಟ್ಟರೆ ಟ್ರ‍್ಯಾಕ್ ಪರೀಕ್ಷೆ ಕೂಡ ಪಾಸ್ ಮಾಡುತ್ತಿದ್ದಾರೆ ಎಂದು ಮಾತನಾಡಿದ್ದಾರೆ. ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಡ್ರೈವರ್ ಒಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಟ್ರ‍್ಯಾಕ್ ಪರೀಕ್ಷೆ ಪಾಸ್ ಆದರೆ 30 ಸಾವಿರ ಕೊಟ್ರೆ ಸಾಕು, ಟ್ರ‍್ಯಾಕ್ ಪರೀಕ್ಷೆ ಪಾಸ್ ಆಗಿಲ್ಲ ಅಂದ್ರೆ 40 ಸಾವಿರ ಕೊಡಬೇಕೆಂದು ಮತ್ತೊಬ್ಬ ವ್ಯಕ್ತಿಗೆ ಹೇಳುತ್ತಾನೆ. ನಾನು ಕೂಡ ಹಣ ಕೊಟ್ಟು ಟ್ರ‍್ಯಾಕ್ ಪರೀಕ್ಷೆ ಪಾಸ್ ಆದೆ ಎಂದು ಡ್ರೈವರ್ ತಿಳಿಸಿದ್ದಾನೆ. ಲಂಚ ಪಡೆದು ಪರೀಕ್ಷೆ ಪಾಸ್ ಮಾಡುತ್ತಿದ್ದಾರೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

   ಇನ್ನೂ ಶಕ್ತಿ ಯೋಜನೆ ಬಳಿಕ ಸಾವಿರಾರು ಪ್ರಯಾಣಿಕರು ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದಾರೆ. ನೂರಾರು ಜನರನ್ನು ಹೊತ್ತೊಯ್ಯುವ ಬಸ್ ಚಾಲಕನನ್ನು ಹಣ ಪಡೆದು ನೇಮಕಾತಿ ಮಾಡಿದರೆ ಜನರ ಪ್ರಾಣಕ್ಕೆ ಹೊಣೆ ಯಾರೆಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳ ವಿರುದ್ಧ ಕನ್ನಡ ಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡ್ರೈವಿಂಗ್ ಬಾರದವರನ್ನು ಅಕ್ರಮ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸಿ ಜನರ ಪ್ರಾಣಕ್ಕೂ ಕೂಡ ಕುತ್ತು ಉಂಟಾಗಲಿದೆಂಬ ಗಂಭೀರ ಆರೋಪ ಮಾಡಿದ್ದಾರೆ.

   ಒಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಚಾಲಕರ ಹೊರಗುತ್ತಿಗೆ ನೇಮಕದಲ್ಲೂ ಕೂಡ ಅಕ್ರಮದ ವಾಸನೆ ಬಂದಿದೆ. ಬಸ್ ಸಾರಥಿಯನ್ನು ಹಣದ ಮೂಲಕ ನೇಮಕಾತಿ ಮಾಡಿಕೊಂಡ್ರೆ ಪ್ರಯಾಣಿಕರ ಗತಿಯೇನು? ಅವರ ಪ್ರಾಣಕ್ಕೆ ಗ್ಯಾರಂಟಿ ಯಾರೆಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಇದರಲ್ಲಿ ಯಾರೂ ಭಾಗಿ ಆಗಿದ್ದಾರೆಂಬುದು ತನಿಖೆಯ ಮೂಲಕವಷ್ಟೇ ಹೊರಬರಬೇಕಿದೆ.