ಕೊರಟಗೆರೆ :
ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲ್ಲೊಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಮುಂಜಾನೆ 7.30 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ಸುಧಾಮೂರ್ತಿರವರಿಗೆ ಟ್ರಸ್ಟ್ನವರು ಕುಂಭ ಮೇಳದ ಸ್ವಾಗತದ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಂಡರು. ಅವರು ತಂದಂತಹ ಪೂಜಾ ಸಾಮಗ್ರಿಗಳಿಂದ ದೇವಿಯನ್ನು ಸಿಂಗರಿಸಿ ವಿಶೇಷ ಪೂಜೆ ಜರುಗಿಸಿದರು.
ಈ ವೇಳೆ ಮಾತನಾಡಿದ ಸುಧಾಮೂರ್ತಿಯವರು, ಕೋವಿಡ್ನಿಂದ ಕಳೆದ ಎರಡು ವರ್ಷಗಳಿಂದಲೂ ಧಾರ್ಮಿಕ ಕ್ಷೇತ್ರಗಳು ಕಳೆಗುಂದಿವೆ. ಆರೋಗ್ಯ ದೃಷ್ಟಿಯಿಂದ ಕೋವಿಡ್ ನಿಯಮಾವಳಿಗಳನ್ನು ಜನರು ಪಾಲಿಸಬೇಕು. ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರ ಪಾತ್ರವೂ ಬಹು ಮುಖ್ಯವಾಗಿರುತ್ತದೆ. ಮಾನವನ ಜಂಜಾಟದ ಜೀವನದಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ಧಾರ್ಮಿಕ ಚಟುವಟಿಕೆಗಳಿಂದ ಮಾತ್ರ ನೆಮ್ಮದಿ ಹೊಂದಲು ಸಾಧ್ಯ ಎಂದರಲ್ಲದೆ, ಈ ಹಿಂದಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಗತವೈಭವವನ್ನು ಮರುಕಳಿಸುವಂತಹ ಕೆಲಸ ಟ್ರಸ್ಟ್ನಿಂದ ಆಗಲಿ ಎಂದು ನೂತನ ಟ್ರಸ್ಟ್ಗೆ ಶುಭ ಹಾರೈಸಿದರು.
ಶಾರದೆಗೆ ಒತ್ತು ಕೊಡುವಂತೆ ಟ್ರಸ್ಟ್ಗೆ ಕಿವಿಮಾತು :
ಸುಧಾಮೂರ್ತಿಯವರು ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ, ಕಾರ್ಯಾಲಯಕ್ಕೆ ಭೇಟಿ ನೀಡಿ ಟ್ರಸ್ಟ್ನ ಪದಾಧಿಕಾರಿಗಳಿಗೆ ಶಿಕ್ಷಣಕ್ಕೆ ಒತ್ತು ಕೊಡಿ, ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಮಾಡಲು ಸಾಧ್ಯ. ಲಕ್ಷ್ಮೀ ಕ್ಷೇತ್ರದಲ್ಲಿ ಶಾರದೆಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಮೂಲಕ ಸಮಾಜ ಸುಧಾರಣೆ ಮಾಡಿ ಎಂದು ಕಿವಿಮಾತು ಹೇಳಿದರು.
ನೂತನ ಭೋಜನಾಲಯ ವೀಕ್ಷಣೆ :
ಟ್ರಸ್ಟ್ನ ಅಧ್ಯಕ್ಷರು ಸೇರಿದಂತೆ ಧರ್ಮದರ್ಶಿಗಳೊಂದಿಗೆ ನೂತನ ದಾಸೋಹವನ್ನು ವೀಕ್ಷಿಸಿದ ಅವರು, ಧರ್ಮಸ್ಥಳದ ಮಾದರಿಯಲ್ಲಿ ದಾಸೋಹ ಕಟ್ಟಡ ನಿರ್ಮಿಸಿರುವುದು ಬಹಳ ಸೊಗಸಾಗಿದೆ, ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ವಾಸುದೇವ್, ಕಾರ್ಯದರ್ಶಿ ನರಸಯ್ಯ, ಖಜಾಂಚಿ ಮಂಜುನಾಥ್, ಪ್ರಧಾನ ಅರ್ಚಕ ಪ್ರಸನ್ನಕುಮಾರ್, ಧರ್ಮದರ್ಶಿಗಳಾದ ಲಕ್ಷ್ಮಿಕಾಂತ್, ನಟರಾಜ್, ಶ್ರೀ ಪ್ರಸಾದ್, ರವಿರಾಜ್ ಅರಸ್, ಮುರಳಿ ಕೃಷ್ಣ, ಓಂಕಾರೇಶ್ವರ, ಜಗದೀಶ್, ರಾಮಲಿಂಗಯ್ಯ, ನರಸರಾಜು, ಲಕ್ಷ್ಮೀನರಸಯ್ಯ, ನಾಗರಾಜು, ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ, ಮಾಜಿ ಕಾರ್ಯನಿರ್ವಹಣಾಧಿಕಾರಿ ಡಿ.ಎನ್ ರಮೇಶ್ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
