ಮಂಗಳೂರು:
ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಈ ಬಾರಿಯಾದರೂ ಸತ್ಪಾತ್ರರಿಗೆ ಗೌರವ ಡಾಕ್ಟರೇಟ್ ಲಭಿಸಲಿ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶಯ ವ್ಯಕ್ತಪಡಿಸಿದೆ.ಮಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವದ ಸಂದರ್ಭದಲ್ಲಿ ‘ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ’ ಪ್ರಕಾರ ಶಿಕ್ಷಣ, ಕಲೆ, ಸಾಹಿತ್ಯ, ಇಲ್ಲವೇ ವಿಜ್ಞಾನ ಅಥವಾ ಯಾವುದೇ ಬೌದ್ಧಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದವರನ್ನು ಗುರುತಿಸಿ ಅವರಿಗೆ ‘ಗೌರವ ಡಾಕ್ಟರೇಟ್’ ನೀಡಬೇಕೆಂಬುದು ಸಾರ್ವಜನಿಕ ನಿರೀಕ್ಷೆ ಹಾಗೂ ಗೌರವನೀಯ ಕ್ರಮ.
ಆದರೆ, ಮಂಗಳೂರು ವಿಶ್ವವಿದ್ಯಾಲಯವು ಇತ್ತೀಚಿನ ವರ್ಷಗಳಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನಿಗದಿತ ಮಾನದಂಡಗಳಿಗೆ ಭಿನ್ನವಾಗಿ ಧನವಂತ ಉದ್ದಿಮೆದಾರರಿಗೆ, ವ್ಯಾಪಾರಸ್ಥರಿಗೆ ಮತ್ತಿತರ ಪ್ರಭಾವಿ ವ್ಯಕ್ತಿಗಳಿಗೆ ನೀಡುತ್ತಾ ಬಂದಿದ್ದು, ತನ್ನ ಹೆಸರಿಗೆ ಅಪಖ್ಯಾತಿ ಹಾಗೂ ‘ಗೌರವ ಡಾಕ್ಟರೇಟ್’ ಪದವಿಗೆ ಅಗೌರವ ತಂದುಕೊಳ್ಳುತ್ತಿರುವುದು ದುರದೃಷ್ಟಕರ. ವಿವಿಯ ಈ ಪ್ರವೃತ್ತಿಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಬಲವಾಗಿ ಖಂಡಿಸುತ್ತದೆ.
ಇದೀಗ ಈ ಸಾಲಿನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಾದರೂ ಯಾವುದೇ ಪ್ರಭಾವ, ಧನದ ಆಮಿಷ, ರಾಜಕೀಯ ಒತ್ತಡ, ಕಮಿಷನ್ ಏಜೆಂಟ್ಗಳ ತಂತ್ರಗಾರಿಕೆಗೆ ಬಲಿಯಾಗದೆ, ಕೇವಲ ವ್ಯಕ್ತಿಗಳ ಶೈಕ್ಷಣಿಕ ಬೌದ್ಧಿಕ, ಸಾಹಿತ್ಯ, ಕಲಾ ಸಾಧನೆಗಳನ್ನು ಮಾತ್ರ ಆಧಾರವಾಗಿರಿಸಿಕೊಂಡು ‘ಗೌರವ ಡಾಕ್ಟರೇಟ್’ ಪದವಿಯನ್ನು ಪ್ರದಾನಿಸಬೇಕು.
ಆ ಮೂಲಕ ವಿಶ್ವವಿದ್ಯಾಲಯ ಉಪಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯ ಮಂಡಳಿ ತನ್ನ ಗೌರವವನ್ನು ಉಳಿಸಿಕೊಳ್ಳುವುದು ಮತ್ತು ಗೌರವ ಡಾಕ್ಟರೇಟ್ ಪದವಿ ಅಪಹಾಸ್ಯಕ್ಕೆ ಈಡಾಗದಂತೆ ಮಾಡುವುದೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶಿಸುತ್ತದೆ. ಗೌರವ ಡಾಕ್ಟರೇಟ್ನ್ನು ಸತ್ಪಾತ್ರರಿಗೆ ನೀಡಲು ಸಾಧ್ಯವಾಗದೆ ಇದ್ದರೆ ಈ ಹಿಂದೆ ಕೆಲವು ಬಾರಿ ಮಾಡಿದಂತೆ ಯಾರಿಗೂ ಅದನ್ನು ನೀಡದೆ, ಗೌರವ ಡಾಕ್ಟರೇಟ್ನ ಘನೆತೆ ಹಾಗೂ ವಿವಿಯ ಘನತೆ ಗೌರವವನ್ನು ಉಳಿಸಿಕೊಳ್ಳುವುದೇ ಶ್ರೇಯಸ್ಕರ ಎಂದು ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
