ಬೆಂಗಳೂರು
ಇಡೀ ದೇಶದೆಲ್ಲೆಡೆ ಸದ್ದು-ಗದ್ದಲದಿಂದ ನಡೆಯುವ ಗೌರಿ-ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆ 15 ದಿನ ಮುಂಚಿತವಾಗಿಯೇ ಬಂದೋಬಸ್ತ್ ಕೈಗೊಳ್ಳುವ ಬಗ್ಗೆ ಪೊಲೀಸರು ಸಿದ್ಧತೆ ಶುರು ಮಾಡಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ. ಹಬ್ಬದ ವೇಳೆ ಯಾವುದೇ ಸಮಸ್ಯೆ, ತೊಂದರೆ ಆಗದಂತೆ ಎಚ್ಚರ ವಹಿಸಲು ಸಿದ್ಧತೆ ನಡೆದಿದೆ.
ಹಬ್ಬಕ್ಕೆ ನಗರ ಪೊಲೀಸರಿಂದ ಏರಿಯಾ ಡಾಮಿನೇಷನ್ ಸ್ಟ್ರಾಟಜಿ ರೂಪಿಸಲಾಗಿದೆ. ಎಲ್ಲಾ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳನ್ನು ಠಾಣೆಗೆ ಕರೆಸಿ ವಾರ್ನ್ ಮಾಡಲಾಗಿದೆ. ಗಣೇಶ ಕೂರಿಸಿದಾಗ, ಅಥವಾ ವಿಸರ್ಜನೆ ವೇಳೆ ಯಾವುದೇ ಗಲಾಟೆ ಮಾಡುವಂತಿಲ್ಲ. ಸಮಸ್ಯೆ ಆಗಬಾರದೆಂದು ವಾರ್ನಿಂಗ್ ಕೊಡಲಾಗಿದೆ. ಇನ್ನು ರಾತ್ರಿ ಸಮಯದಲ್ಲಿ ಪುಂಡಾಟ ನಡೆಸುವವರ ಮೇಲೂ ಹದ್ದಿನ ಕಣ್ಣಿಡಲಾಗುತ್ತಿದೆ. ಪ್ರಸ್ತುತ ಏರಿಯಾದಲ್ಲಿ ಯಾಱರ ನಡುವೆ ಹಳೆಯ ವೈಷಮ್ಯವಿದೆ. ಅವರೇನಾದ್ರೂ ಗಣಪತಿ ಕೂರಿಸ್ತಿದ್ದಾರಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆ ಗಲಾಟೆ ಮಾಡಿಕೊಂಡವರನ್ನು ಈಗಾಗಲೇ ಕರೆಸಿ ವಾರ್ನಿಂಗ್ ಕೊಡಲಾಗಿದೆ. ಪುಂಡಾಟ ಮಾಡುವ ಯುವಕರಿಗೂ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
