ತುಮಕೂರು ದಸರಾ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ತುಮಕೂರು

   ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತವು ಆಯೋಜಿಸಿರುವ ‘ತುಮಕೂರು ದಸರಾ 2024’ ಕಾರ್ಯಕ್ರಮಕ್ಕೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಚಾಲನೆ ನೀಡಿದರು.ಗುರುವಾರ ಬೆಳಗ್ಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಗಣ್ಯರನ್ನು ಸ್ವಾಗತಿಸಿದರು. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಧಾರ್ಮಿಕ ಮಂಟಪದ ಮುಂಭಾಗದಲ್ಲಿ ಸಚಿವ ಪರಮೇಶ್ವರ ಅವರು ನಾಡ ಧ್ವಜಾರೋಹಣಾ ನೆರವೇರಿಸಿದರು.

   ಬಳಿಕ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಧಾರ್ಮಿಕ ಮಂಟಪದಲ್ಲಿ ಶ್ರೀ ಶೈಲಾಪುತ್ರಿ ದೇವಿಗೆ ಶ್ರೀಮತಿ ಕನ್ನಿಕಾ ಪರಮೇಶ್ವರಿ ಮತ್ತು ಸಚಿವ ಜಿ.ಪರಮೇಶ್ವರ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕನ್ನಿಕಾ ಪರಮೇಶ್ವರಿ ಅವರೊಂದರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ, ತಹಶೀಲ್ದಾರ್ ರಾಜೇಶ್ವರಿ ಅವರು ಹೋಮ ಪೂಜೆಯನ್ನು ನೆರವೇರಿಸಿದರು.

   ಮುಖ್ಯವೇದಿಕೆಯಲ್ಲಿ ಡೊಳ್ಳು ಭಾರಿಸುವ ಮೂಲಕ ವಿವಿಧ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅದ್ಧೂರಿ ಚಾಲನೆ ನೀಡಲಾಯಿತು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ದಸರಾ ಹಬ್ಬಕ್ಕೆ ಅನೇಕ ವಿಚಾರಧಾರೆಗಳಿವೆ. ಈ ಬಗ್ಗೆ ವೇದ ಪುರಾಣಗಳಲ್ಲಿ ಒಳ್ಳೆಯದನ್ನೇ ಬರೆದಿಟ್ಟಿದ್ದಾರೆ. ಹಿಂದೂ ಧರ್ಮ ಕೇವಲ ನಾಲ್ಕು ಜನರಿಗೆ ಸೇರಿದ ಧರ್ಮವಲ್ಲ. ಅದರಲ್ಲಿನ ವಿಚಾರಧಾರೆಗಳು ಪ್ರತಿಯೊಬ್ಬ ಭಾರತೀಯನಿಗೆ ತಲುಪಬೇಕು. ಧರ್ಮದ ಆಧಾರದ ಮೇಲೆ ಸಂವಿಧಾನ ನಿಂತಿದೆ. ಇದನ್ನೇ ಡಾ.‌ಬಿ.ಆರ್.ಅಂಬೇಡ್ಕರ್ ಅವರು ಬರೆದಿಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

   ಪ್ರತಿಯೊಬ್ಬರಿಗೂ ನನ್ನ ದೇಶ, ನನ್ನ ಸಂಸ್ಕೃತಿ ಎಂಬ ಭಾವನೆ ಬರಬೇಕು ಎಂಬ ನಿಟ್ಟಿನಲ್ಲಿ ಸಂವಿಧಾನ ಬರೆಯಲಾಗಿದೆ. ಹೀಗಾಗಿ ಇಂತಹ ಕಾರ್ಯಕ್ರಮಗಳನ್ನು ದೇಶದೆಲ್ಲೆಡೆ ಆಚರಿಅಗುತ್ತಿದೆ ಎಂದು ಹೇಳಿದರು.

   ನಾಡಿನ ದೇವತೆ ಚಾಮುಂಡೇಶ್ವರಿಯು ದುಷ್ಟಶಕ್ತಿಯನ್ನು ಸಂಹಾರ ಮಾಡುತ್ತಾಳೆ. ಸಮಾಜದ ಕೀಳು ಹೋಗಲಾಡಿಸುವ ಕೆಲಸ ನಮ್ಮ ಮನಸ್ಸಿನೊಳಗಿಂದ ಆಗಬೇಕು ಎಂಬುದಾಗಿದೆ.‌ ಸಮಾಜದಲ್ಲಿರುವ ದುಷ್ಟ ಶಕ್ತಿಗಳು ಹೋಗಬೇಕು. ಇದು ಚಾಮುಂಡೇಶ್ವರಿ ಪುರಾಣದ ತಾತ್ಪರ್ಯ ಎಂದರು.

   ಇಡೀ ದೇಶದಲ್ಲಿ ದಸರಾವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಮಹಾರಾಜರು ದಸರಾ ಆಚರಣೆಯ ಪದ್ಧತಿಯನ್ನು ಆರಂಭಿಸಿದ್ದಾರೆ. ಮೈಸೂರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರೆ ಮನಸ್ಸು ಹಗುರವಾಗುತ್ತದೆ. ನವರಾತ್ರಿಯ ಒಂಬತ್ತು ದಿವಸ ಅರಮನೆ ಮತ್ತು ದೇವಸ್ಥಾನದಲ್ಲಿ ಮಾಡುವ ಪೂಜೆ ಶ್ರೇಷ್ಟತೆಯನ್ನು ಪ್ರತಿಬಿಂಬಿಸುತ್ತವೆ. ವಿಶ್ವವಿಖ್ಯಾತಿಯಾಗಿರುವ ಮೈಸೂರು ದಸರಾ ಜನರ ಆಕರ್ಷಣೆ ಮಾತ್ರವಲ್ಲದೇ, ವಿಶ್ವಕ್ಕೆ ಹೊಸ ಸಂದೇಶ ರವಾನೆಯಾಗುತ್ತಿದೆ‌. ಹೀಗಾಗಿ ಈ ವರ್ಷದಿಂದ ಜಿಲ್ಲಾಡಳಿತದ ವತಿಯಿಂದ ತುಮಕೂರು ದಸರಾ ಆಚರಿಸಲಾಗುತ್ತಿದೆ ಎಂದು ಹೇಳಿದರು.

   ಜಿಲ್ಲೆಗೆ ಹೆಚ್‌ಎಎಲ್ ಫ್ಯಾಕ್ಟರಿ ಬಂದಿದೆ. ಹೆಲಿಕ್ಯಾಪ್ಟರ್ ತಯಾಸರಿಸುತ್ತಿರುವುದು ಜನರಿಗೆ ತೋರಿಸಬೇಕು. ಈ ನಿಟ್ಟಿನಲ್ಲಿ ಹೆಚ್‌ಎಎಲ್‌ನಲ್ಲಿ ತಯಾರಿಸಿರುವ ಹೆಲಿಕ್ಯಾಪ್ಟರ್ ಪ್ರದರ್ಶನಕ್ಕೆ ನಿಲ್ಲಿಸಲಾಗುವುದು. ಇಸ್ರೋ ಸಂಸ್ಥೆಗೆ 150 ಎಕರೆ ಜಮೀನು ನೀಡಲಾಗಿದೆ. ಚಂದ್ರಯಾನ ರಾಕೆಟ್‌ಗೆ ಕ್ರಯೋಜನಿಕ್ ಯಂತ್ರವನ್ನು ಇಸ್ರೋ ತಯಾರಿಸಿದೆ. ಮಕ್ಕಳಿಗೆ ವಿಜ್ಞಾನದ ಬಗ್ಗೆ ಜ್ಞಾನ ಮೂಡಿಸುವ ನಿಟ್ಟಿನಲ್ಲಿ ಕ್ರಯೋಜನಿಕ್ ಯಂತ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು. ಪ್ರಸಿದ್ಧ ವಿಜ್ಞಾನಿ ರಾಜ ರಾಮಣ್ಣ ಅವರ ಹೆಸರಿನಲ್ಲಿ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು.

   ದೊಡ್ಡರಂಗೇಗೌಡ, ಬರಗೂರು ರಾಮಚಂದ್ರಪ್ಪ ಅವರು ಸೇರಿದಂತೆ ಹಲವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬಡತನ, ರೈತರ ಕುರಿತು ಸೇರಿದಂತೆ ಅನೇಕ ವಿಷಯಗಳ ಚರ್ಚಾಗೋಷ್ಟಿಗಳು ನಡೆಯಲಿವೆ. ತುಮಕೂರು ದಸರಾ ದೇವರ ಪೂಜೆಗೆ ಮಾತ್ರ ಸೀಮಿತವಲ್ಲದೇ, ಇದೊಂದು ಸಮಾಜಮುಖಿ ಕಾರ್ಯಕ್ರಮವಾಗಿದೆ ಎಂದರು.

   ತುಮಕೂರು ದಸರಾ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದಲು ಅನುದಾನ ಕೋರಿದ ಕೂಡಲೇ 1 ಕೋಟಿ ರೂ. ಮಂಜೂರು ಮಾಡಿದರು. ಮುಂದಿನ ದಿನಗಳಲ್ಲಿಯೂ ತುಮಕೂರು ದಸರಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು ಎಂದು ಹೇಳಿದರು.

   ಅನೇಕ ವರ್ಷಗಳಿಂದ ತುಮಕೂರಿನಲ್ಲಿ ಹಿರಿಯರು ದಸರಾ ಆಚರಿಸಿಕೊಂಡು ಬರುತ್ತಿದ್ದಾರೆ. ಅವರನ್ನು ಸ್ಮರಿಸುತ್ತೇನೆ. ಹಿರಿಯರ ಸಲಹೆ, ಸೂಚನೆಗಳನ್ನು ಪಡೆದು ಪ್ರಥಮ ಬಾರಿಗೆ ತುಮಕೂರು ದಸರಾ ಆಚರಣೆಗೆ‌ ಸಿದ್ಧತೆ ಮಾಡಲಾಯಿತು. ಇದು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅವರೆಲ್ಲ ನಾಡಿನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೇಂದ್ರ ಸಚಿವ ಸೋಮಣ್ಣ, ಸಚಿವ ಕೆ.ಎನ್.ರಾಜಣ್ಣ ಹಾಗೂ ಎಲ್ಲ ಶಾಸಕರು ತುಮಕೂರು ದಸರಾ ನಡೆಸಲು ಸಹಕರಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ತಿಳಿಸಿದರು.

   ಈ ಭಾಗದ ದೇವಸ್ಥಾನಗಳಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ. ನೂರು ದೇವರುಗಳ‌ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ಆನೆಯು ಇರಲಿದೆ. ಮೂವತ್ತು ವರ್ಷದ ಹಿಂದೆ ನಾನೇ ಆನೆಯನ್ನು (ಲಕ್ಷ್ಮೀ) ಕೊಡಿಸಿದ್ದೆ. ಇದು ನನಗೆ ಜ್ಞಾಪಕ ಇರಲಿಲ್ಲ. ನನ್ನ ಶ್ರೀಮತಿಯವರು ಹೇಳಿದರು ಎಂದರು.

   ಶ್ರೀ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕೊರಟಗೆರೆಯ ನರಸಿಂಹಗಿರಿ ಕ್ಷೇತ್ರ ಎಲೆರಾಂಪುರದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಕೆ.ಷಡಕ್ಷರಿ, ಗೃಹ ಸಚಿವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರಿ, ಮಾಜಿ ಶಾಸಕ ರಫಿಕ್ ಅಹ್ಮದ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ‌.ಅಶ್ವಿಜಾ, ಜಿಲ್ಲಾ ಪಂಚಾಯತ್ ಸಿಇಒ ಪ್ರಭು, ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ವೆಂಕಟ್ ಅವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link