ಗೃಹ ಲಕ್ಷ್ಮಿ ಹಣದಿಂದ ಗ್ರಾಮಕ್ಕೆ ಊಟ ಹಾಕಿಸಿದ ವೃದ್ಧೆ….!

ಬೆಳಗಾವಿ: 

    ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ವೃದ್ಧ ಮಹಿಳೆಯೊಬ್ಬರು ಇಡೀ ಗ್ರಾಮಕ್ಕ ಊಟ ಹಾಕಿಸಿದ್ದಾರೆ.ಒಂದೆರಡು ತಿಂಗಳಿನಿಂದ ಸ್ಥಗಿತಗೊಂಡಿದ ಗೃಹ ಲಕ್ಷ್ಮಿ ಯೋಜನೆ ಈಗ ಪುನಾರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ವೃದ್ಧ ಮಹಿಳೆ ಅಕ್ಕತಾಯಿ ಲಂಗೂಟಿ (65) ತಮ್ಮ ಬುದ್ಧಿಮಾಂದ್ಯ ಮಗನೊಂದಿಗೆ ಇದ್ದು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಸಟ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

    ಇಡೀ ಗ್ರಾಮಕ್ಕೆ ಅಕ್ಕತಾಯಿ ಲಂಗೂಟಿ ಹೋಳಿಗೆ ಊಟ ಹಾಕಿಸಿದ್ದು, ಇದರ ಖರ್ಚನ್ನು ಆಕೆ ಗೃಹ ಲಕ್ಷ್ಮಿ ಯೋಜನೆಯಿಂದ ಬಂದ ಹಣದ ಮೂಲಕ ಭರಿಸಿದ್ದಾರೆ. ಅಕ್ಕತಾಯಿ ಅವರು ಕೃಷಿ ಹಾಗೂ ಎಮ್ಮೆ ಹಾಲು ಮಾರಾಟ ಮಾಡಿಕೊಂಡು ಜೀವಿಸುತ್ತಿದ್ದು, ಆರ್ಥಿಕವಾಗಿ ಅನುಕೂಲವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಆಧ್ಯಾತ್ಮಿಕ ಜೀವಿಯಾಗಿರುವ ಅಕ್ಕತಾಯಿ, ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಾರೆ. ಗೃಹ ಲಕ್ಷ್ಮಿ ಯೋಜನೆ ಸ್ಥಗಿತಗೊಂಡಾಗ, ಗ್ರಾಮ ದೇವತೆಯಾದ ಅಡವಿ ಲಕ್ಷ್ಮಿ ದೇವಾಲಯಕ್ಕೆ ಹರಕೆ ಹೊತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಕ್ಕತಾಯಿ ತನ್ನ ನೆರೆಹೊರೆಯವರಾದ ದುಂಡವ್ವ ನೂಲಿ (70) ಮತ್ತು ಲಕ್ಕವ್ವ ಹಟ್ಟಿಹೊಳಿ (55) ಮತ್ತು ಇತರ ಮಹಿಳೆಯರಿಗೆ ತನ್ನ ಯೋಜನೆಯನ್ನು ತಿಳಿಸಿದ್ದರು. 

    ಹೋಳಿಗೆ, ಸಿಹಿ ಖಾದ್ಯವನ್ನು ತಯಾರಿಸಲು ಅಕ್ಕತಾಯಿ ಇನ್ನಿತರರ ಸಹಾಯವನ್ನೂ ಕೋರಿದ್ದರು. ಅವರಿಂದ ಪ್ರೇರಿತರಾದ ಸುಮಾರು 50 ಮಹಿಳೆಯರು ತಲಾ 100 ರೂ.ಗಳನ್ನು ನೀಡಿದರೆ, ಅಕ್ಕತಾಯಿ ವಿಶೇಷ ಊಟಕ್ಕೆ 10,000 ರೂ ನೀಡಿ, ಸುಮಾರು ಒಂದು ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.

    ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೆ.ಬಿ.ಭಾಗೋಜಿಕೊಪ್ಪ ಮತ್ತು ತಂಡವನ್ನು ಭಾನುವಾರ ಸೂಸಟ್ಟಿ ಗ್ರಾಮಕ್ಕೆ ಕಳುಹಿಸಿ ಅಕ್ಕತಾಯಿ ಅವರನ್ನು ಸನ್ಮಾನಿಸಿದರು.ವೃದ್ಧೆಗೆ ರೇಷ್ಮೆ ಸೀರೆ ಮತ್ತು ಮನೆಯಲ್ಲಿ ಮಾಡಿದ ಹೋಳಿಗೆಯನ್ನು ಉಡುಗೊರೆಯಾಗಿ ನೀಡಲಾಯಿತು. ನಂತರ ಹೆಬ್ಬಾಳ್ಕರ್ ಅವರು ಅಕ್ಕತಾಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ವೃದ್ಧೆಯ ನಡೆಯನ್ನು ಶ್ಲಾಘಿಸಿದರು.

 

Recent Articles

spot_img

Related Stories

Share via
Copy link