ಬೆಳಗಾವಿ: 
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಈ ಯೋಜನೆ ಹಣವನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವ ಹಲವು ಗೃಹಲಕ್ಷ್ಮಿಯರ ಯಶೋಗಾಥೆಯನ್ನೂ ಕಾಣುತ್ತಿದ್ದೇವೆ. ಇದೀಗ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಹೋಳಿ, ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 570 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ತನ್ನ ಈ ಸಾಧನೆಗೆ ತಾಯಿಗೆ ಬರುವ ಗೃಹಲಕ್ಷ್ಮಿ ಹಣವು ಸಾಕಷ್ಟು ನೆರವಾಗಿದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ತಂದೆ ಇಲ್ಲದ ಕಾರಣ ಪೃಥ್ವಿಯ ತಾಯಿ ಶ್ಯಾಮಲಾ ಹೋಳಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ಬರುವ ಗೃಹಲಕ್ಷ್ಮಿ ಹಣವು ಪೃಥ್ವಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಪ್ರತಿದಿನವೂ ಪರಿಪೂರ್ಣ ಶಿಕ್ಷಣಕ್ಕೆ ಹಂಬಲಿಸಿದ ಹೆಣ್ಣು ಮಗಳ ಕನಸು ಈ ಯೋಜನೆಯ ಮೂಲಕ ಸಾಕಾರಗೊಂಡಿದೆ. ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು, ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿತ್ತು. ಗೃಹಲಕ್ಷ್ಮಿ ಯೋಜನೆಯು ಆ ಕನಸನ್ನು ಸಾಕಾರಗೊಳಿಸುತ್ತಿದೆ ಎಂದು ಎಂದು ಸರ್ಕಾರ ತಿಳಿಸಿದೆ.








