ಗುಬ್ಬಿ : ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಾಸಕರ ಕಿಡಿ!

 ಗುಬ್ಬಿ : 

      ತಾಲ್ಲೂಕಿನ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲು ತ್ರೈಮಾಸಿಕ ಸಭೆಗೆ ಆಗಮಿಸಲು ತಿಳಿಸಿದ್ದರೂ ಸಭೆಗೆ ಹಾಜರಾಗದೆ ರಜೆ ಕಾರಣ ನೀಡಿದ ತಹಸೀಲ್ದಾರ್ ಹಾಗೂ ಬೆಸ್ಕಾಂ ಎಇಇ ಇವರುಗಳ ವಿರುದ್ದ ಕ್ರಮವಹಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲು ಶಾಸಕರಾದ ಎಸ್.ಆರ್.ಶ್ರೀನಿವಾಸ್ ಹಾಗೂ ಮಸಾಲಾ ಜಯರಾಂ ಸೂಚಿಸಿದರು.

      ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಗರ್‍ಹುಕುಂ ಹಾಗೂ ಕೆಲ ವಿದ್ಯುತ್ ಉಪಸ್ಥಾವರ ಸ್ಥಾಪನೆ ಪ್ರಮುಖ ವಿಚಾರ ಮಾತನಾಡಲು ಮುಂದಾದ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳಿಂದ ಸೂಕ್ತ ಉತ್ತರ ಸಿಗದ ಕಾರಣ ಅಸಮಧಾನಗೊಂಡ ಶಾಸಕರಿಬ್ಬರೂ ಸರ್ಕಾರದ ಗಮನಕ್ಕೆ ತಂದು ಶಿಸ್ತು ಕ್ರಮವಹಿಸಲು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿ ಮಾಹಿತಿ ನೀಡಲು ತಡಬಡಾಯಿಸಿದ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡರು.

      ಪ್ರತಿ ಸೋಮವಾರದಂದು ಡಿಸಿ ಮೀಟಿಂಗ್ ಅಥವಾ ಸಿಎಸ್ ಮೀಟಿಂಗ್ ಎಂದು ಹೇಳಿ ತೆರಳುವ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಶಾಸಕರ ಸಭೆ ಮಹತ್ವ ಎನಿಸಿಲ್ಲವೆ ಸಾರ್ವಜನಿಕರು ತಮ್ಮ ಕುಂದುಕೊರತೆ ಹೊತ್ತು ಸೋಮವಾರ ಶಾಸಕರ ಕಚೇರಿಗೆ ಬರುತ್ತಾರೆ. ಆದರೆ ಅಧಿಕಾರಿಗಳೇ ನಾಪತ್ತೆಯಾದರೆ ಕೆಲಸ ಕಾರ್ಯಗಳು ಹೇಗೆ ಮಾಡಲು ಸಾಧ್ಯ. ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವರ್ಯಾರು ಎಂದು ಸಿಡಿಮಿಡಿಗೊಂಡ ಶಾಸಕ ಶ್ರೀನಿವಾಸ್, ಬಗರ್ ಹುಕುಂ ದಾಖಲೆ ಬಗ್ಗೆ ಮಹತ್ವ ಚರ್ಚೆ ಮಾಡಬೇಕಿರುವ ಸಂದರ್ಭದಲ್ಲಿ ತಹಸೀಲ್ದಾರ್ ಸಭೆಗೆ ಗೈರು ಆಗಿರುವುದು ಮುಜುಗರ ತರುತ್ತದೆ. ಪ್ರತಿ ಹೋಬಳಿಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ನಡೆಸಿ ಶೀಘ್ರದಲ್ಲಿ ಬಡವರ ಪಾಲಿನ ಜಮೀನು ನೀಡಬೇಕಿದೆ ಎಂದು ಸಭೆಯಲ್ಲಿದ್ದ ಶಿರಸ್ತೇದಾರಿಗೆ ತಿಳಿಸಿದರು.

      ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ದ ಆಕ್ರೋಶಗೊಂಡ ಶಾಸಕ ಮಸಾಲಾ ಜಯರಾಮ್, ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಪ್ರಗತಿಯ ಬಗ್ಗೆ ಸಮರ್ಪಕವಾದ ಮಾಹಿತಿ ನೀಡದೆ ಇರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಅನುಸರಿಸಿದ ಪಂಚಾಯತ್‍ರಾಜ್ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಮಜಾಯಿಷಿ ಕೊಟ್ಟ ಅಧಿಕಾರಿ ಗ್ರಾಮ ಪಂಚಾಯಿತಿ ಚುನಾವಣಾ ಕಾರ್ಯಕ್ಕೆ ಪಂಚಾಯತ್‍ರಾಜ್ ಇಲಾಖೆಯ ಎಲ್ಲಾ ಇಂಜಿನಿಯರ್‍ಗಳನ್ನು ಬಳಸಿಕೊಳ್ಳಲಾದ ಕಾರಣ ಕ್ರಿಯಾ ಯೋಜನೆಗೆ ಕೊಂಚ ವಿಳಂಬವಾಗಿದೆ ಎಂದರು.

      ಶುದ್ದ ನೀರಿನ ಘಟಕಗಳು ರಿಪೇರಿಗೆ ಬಂದ ಬಗ್ಗೆ ಚರ್ಚಿಸಲು ಸಭೆಗೆ ಬಾರದ ಪ್ರಭಾರ ಎಇಇ ಅವರ ಬಗ್ಗೆ ಅಸಮಾಧಾನ ಹೊರಹಾಕಿದ ತುರುವೇಕೆರೆ ಶಾಸಕರು, ತಾಲ್ಲೂಕಿನಲ್ಲಿ ನೀರಿನ ಘಟಕ ದುರಸ್ಥಿಗೆ ಬಂದ ಬಗ್ಗೆ ಅಧಿಕಾರಿಗಳಲ್ಲೇ ಮಾಹಿತಿ ಇಲ್ಲದ ಬಗ್ಗೆ ಕಿಡಿಕಾರಿದರು. ನಂತರ ಒಂದು ದಿನ ಘಟಕ ಕೆಟ್ಟು ನಿಂತರೆ ಸಾವಿರಾರು ದಂಡ ಕಟ್ಟಿಸಿಕೊಳ್ಳುವ ನಿಯಮವಿದೆ. ಆದರೆ ಇದರ ಪಾಲನೆ ಎಂದೂ ಆಗಿಲ್ಲ. ತಾಲ್ಲೂಕಿನಲ್ಲಿ ಕೇವಲ ಮೂರು ಘಟಕ ಮಾತ್ರ ದುರಸ್ಥಿ ಎಂದು ಉತ್ತರ ನೀಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಮೂರು ಘಟಕ ರಿಪೇರಿಗೆ ಬಂದ ಉದಾಹರಣೆ ಸಾಕಷ್ಟಿವೆ. ಸಂಬಂಧಪಟ್ಟ ಏಜೆನ್ಸಿಯನ್ನು ಹೊಣೆ ಮಾಡಿದಂಡ ವಸೂಲಿ ಮಾಡಿ ರಿಪೇರಿ ನಡೆಸಲು ತಿಳಿಸಿದರು. ಕಪ್ಪುತಲೆ ಹುಳು ಹಾವಳಿ ಬಗ್ಗೆ ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯ ತಾಳಬಾರದು. ಈ ಬಾರಿ ಕೊಂಚ ಮಳೆ ಕಂಡ ರೈತರು ತೆಂಗು ಬೆಳೆಯಲ್ಲಿ ಸಮಾಧಾನ ಪಟ್ಟಿಕೊಳ್ಳುತ್ತಾರೆ. ಆದರೆ ರೋಗ ಬಾಧೆ ಬಗ್ಗೆ ಎಚ್ಚರವಹಿಸಲು ಸೂಚಿಸಿದರು.

      ಹೊಸಕೆರೆ ರೈತರು ಬೆಸ್ಕಾಂ ವಿರುದ್ದ ಧರಣಿ ನಡೆಸಿದ್ದರ ಬಗ್ಗೆ ಮತ್ತು ತಾಲ್ಲೂಕಿನ ಉಪಸ್ಥಾವರ ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳಿದಾಗ್ಗೆ ಸಭೆಗೆ ಬಂದಿದ್ದ ಜೂನಿಯರ್ ಇಂಜಿನಿಯರ್‍ಯಿಂದ ಸಮಂಜಸ ಉತ್ತರ ಬಾರದ ಕಾರಣಕೋಪ ಹೊರಹಾಕಿದ ಶಾಸಕ ಶ್ರೀನಿವಾಸ್, ಎಇಇ ಅನಿಲ್ ವಿರುದ್ದ ಕ್ರಮವಹಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲು ಸೂಚಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಬಗರ್‍ಹುಕುಂ ಯೋಜನೆಯಡಿ ಅರ್ಜಿ ಹಾಕಿಕೊಂಡು ಹಲವಾರು ವರ್ಷಗಳಿಂದ ಅನುಭವದಲ್ಲಿರುವ ಬಡ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. 40 ವರ್ಷಗಳಿಂದ ಅರಣ್ಯ ಪ್ರದೇಶಕ್ಕೆ ಬಿಟ್ಟುಕೊಟ್ಟ ಅಧಿಕಾರಿಗಳು ಈಗ ಖಾಲಿ ಮಾಡಲು ಸೂಚಿಸಿದರೆ ಬಡ ರೈತರು ಎತ್ತ ಹೋಗಬೇಕು. ಅರ್ಜಿ ಕೂಡಾ ಬಗರ್‍ಹುಕುಂ ಸಮಿಯಲ್ಲಿದೆ. ಅವರಿಗೆ ತೊಂದರೆ ನೀಡಕೂಡದು ಎಂದು ತಾಕೀತು ಮಾಡಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎಚ್.ಜಗನ್ನಾಥ್, ಜಿ.ರಾಮಾಂಜಿನಯ್ಯ, ಡಾ.ನವ್ಯಾಬಾಬು, ಕೆ.ಯಶೋಧಮ್ಮ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುಸೂಯ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್, ಇಒ ನರಸಿಂಹಯ್ಯ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link