ಗುಬ್ಬಿ :
ಗಡಿಭಾಗದ ಹಳ್ಳಿಗಾಡಿನ ಪ್ರದೇಶದ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಿ ತುರುವೇಕೆರೆ ಮತ್ತು ಗುಬ್ಬಿ ಗಡಿಭಾಗದಲ್ಲಿರುವ ಸಣ್ಣ ಹಳ್ಳಿಗಳ ಪಟ್ಟಿ ಮಾಡಿ ಸರ್ಕಾರದ ಹಲವು ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ನೆಟ್ಟೆಕೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ 42 ಲಕ್ಷ ರೂಗಳ ಸಿಸಿ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ಹತ್ತುಹಲವು ಯೋಜನೆ ತರುವ ಜತೆಗೆ ವಿಶೇಷ ಪ್ಯಾಕೇಜ್ ತರಲು ಸಾಕಷ್ಟು ಪ್ರಯತ್ನ ಪಟ್ಟಿದ್ದು ಹಲವು ವಿಚಾರ ಯಶಸ್ವಿಯಾಗಿವೆ. ಬಜೆಟ್ ನಂತರದಲ್ಲಿ ತುರುವೇಕೆರೆ ಕ್ಷೇತ್ರಕ್ಕೆ ಕೋಟ್ಯಾಂತರ ರೂಗಳ ಯೋಜನೆ ನಿರಂತರವಾಗಿ ಬರಲಿದೆ ಎಂದರು.
ಹೇಮಾವತಿ ನೀರು ತಾಲ್ಲೂಕಿನ ಎಲ್ಲಾ ಕೆರೆಗೆ ಹರಿದು ಬೇಸಿಗೆಯ ತಾಪ ತಟ್ಟದಂತೆ ನೋಡಿಕೊಳ್ಳಲಾಗಿದೆ. ಈ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಹಾಹಾಕಾರವಾಗುತ್ತಿತ್ತು. ಈ ಬಾರಿ ಯಾವ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಸಿ.ಎಸ್.ಪುರ ಹೋಬಳಿಯಲ್ಲೂ ನೀರಿನ ಸಮಸ್ಯೆ ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ರೈತರು ಈ ವರ್ಷ ಸಮೃದ್ದರಾಗಿರುವ ಭರವಸೆಯಲ್ಲಿದ್ದಾರೆ. ಇವರ ನಿರೀಕ್ಷೆಯಂತೆ ಕೃಷಿ ಪೂರಕ ಯೋಜನೆಗಳನ್ನು ತರಲು ಸರ್ಕಾರದೊಂದಿಗೆ ಚರ್ಚೆ ನಡೆಸಿದ್ದೇನೆ. ತೆಂಗುಪಾರ್ಕ್ ನಮ್ಮ ಕ್ಷೇತ್ರದಲ್ಲಿ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿ.ಎಸ್.ಪುರ ವಿಎಸ್ಎಸ್ಎನ್ ಅಧ್ಯಕ್ಷ ಬಿ.ಎಸ್.ನಾಗರಾಜು, ಮುಖಂಡರಾದ ಶಿವಲಿಂಗೇಗೌಡ, ಕುಮಾರ್, ಗುತ್ತಿಗೆದಾರ ರಾಮಲಿಂಗೇಗೌಡ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ