ಗುಬ್ಬಿ:
ಹೆದ್ದಾರಿಯಲ್ಲಿ ನಿತ್ಯ ಸಾಗುವ ಸರಕು ಸಾಗಾಣೆಯ ಗೂಡ್ಸ್ ವಾಹನದ ಚಾಲಕರು ಮತ್ತು ಕ್ಲೀನರ್ಗಳ ಪರದಾಟ ಕಂಡು ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಕರ್ನಾಟಕ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಒಕ್ಕೂಟದ ಗುಬ್ಬಿ ಶಾಖೆಯ ಸದಸ್ಯರ ಸೇವಾ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಹೆದ್ದಾರಿ ಬದಿಯ ಹೊಟೇಲ್, ಡಾಬಾಗಳು ಮುಚ್ಚಿರುವ ಈ ಲಾಕ್ಡೌನ್ ಸಂದರ್ಭದಲ್ಲಿ ಊಟಕ್ಕೆ ಪರದಾಡಿದ ಚಾಲಕರು ಕೇವಲ ಬಿಸ್ಕತ್ತು ತಿಂದು ವಾಹನ ಚಲಾಯಿಸಿದ ನಿದರ್ಶನ ಕಂಡು ಮರುಕ ವ್ಯಕ್ತಪಡಿಸಿದ ಟ್ಯಾಕ್ಸಿ ಚಾಲಕರು ತಮ್ಮದೇ ವೃತ್ತಿ ಬಾಂಧವರಿಗೆ ಊಟದ ವ್ಯವಸ್ಥೆ ಮಾಡಲು ಮುಂದಾಗಿ ನಿತ್ಯ ಊಟ ಮತ್ತು ಕುಡಿಯುವ ನೀರಿನ ಬಾಟಲ್ ವಿತರಿಸಿದರು. ಹೆದ್ದಾರಿಯಲ್ಲೆ ನಿಂತು ತುರ್ತುಸೇವೆ ನಿರತ ವಾಹನಗಳು, ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿ ಚಾಲಕರಿಗೆ ಊಟ ನೀಡಿರುವ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಲಾಕ್ಡೌನ್ ಮುಗಿಯುವರೆಗೆ ನಿರಂತರವಾಗಿ ನಡೆಸುವ ದಾಸೋಹಕ್ಕೆ ಟ್ಯಾಕ್ಸಿ ಚಾಲಕರೇ ತಮ್ಮ ದುಡಿಮೆಯ ಹಣ ಬಳಸಿಕೊಂಡು ಸೇವೆ ಮಾಡುತ್ತಿರುವುದು ಸಾರ್ಥಕ ಕಾರ್ಯವಾಗಿದೆ. ಟ್ಯಾಕ್ಸಿ ಚಾಲಕರ ಒಕ್ಕೂಟದ ದರ್ಶನ್ದೊರೆ, ಸಂತೋಷ್, ಸುಧೀಂದ್ರ, ರಾಕೇಶ್, ರಫೀಕ್, ರವಿದೀಕ್ಷಿತ್ ಇತರರು ದಾಸೋಹ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
