ಗುಬ್ಬಿ :
ತಾಲೂಕಿನ ಬಿದಿರೆ ಗ್ರಾಮದ ಜೈನ ಬಸದಿಯಲ್ಲಿ ಸುಮಾರು 15ನೆ ಶತಮಾನಕ್ಕೆ ಸೇರಿದ ಅಪ್ರಕಟಿತ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರದ ವಿದ್ಯಾರ್ಥಿನಿ ಕುಣಿಗಲ್ನ ಸ್ಫೂರ್ತಿಜೈನ್ ಅವರು ತಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಇತ್ತೀಚಿಗೆ ಪತ್ತೆ ಮಾಡಿದ್ದಾರೆ.
ಬಿದಿರೆಯ ಜೈನ ಬಸದಿಯಲ್ಲಿರುವ ಮೂಲ ತೀರ್ಥಂಕರ ಶ್ರೀ ಸುಪಾರ್ಶ್ವನಾಥ ತೀರ್ಥಂಕರರ ಪಾದ ಪೀಠದಲ್ಲಿ 2 ಸಾಲಿನ ಶಾಸನ ಪತ್ತೆಯಾಗಿದೆ.
15ನೇ ಶತಮಾನದ ಶಾಸನ :
ಶಾಸನದಲ್ಲಿ ಸ್ಪಷ್ಟವಾದ ಕಾಲದ ಉಲ್ಲೇಖವಿರದ ಕಾರಣ ಲಿಪಿ ಮತ್ತು ತೀರ್ಥಂಕರರ ಶಿಲ್ಪದ ಆಧಾರದ ಮೇಲೆ ಈ ಶಾಸನವು 15ನೆ ಶತಮಾನಕ್ಕೆ ಸೇರಿದೆ ಎಂದು ಶಾಸನ ಪಠ್ಯವನ್ನು ಓದಿ ಕೊಟ್ಟ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರದ ನಿರ್ದೇಶಕರಾದ ಶಾಸನತಜ್ಞ ಡಾ.ಎಂ.ಜಿ.ಮಂಜುನಾಥ್ ಅವರು ತಿಳಿಸಿದ್ದಾರೆ.
ಸುಂದರ ಜೈನ ಪ್ರತಿಮೆ :
ಸುಪರ್ಶ್ವನಾಥ ತೀರ್ಥಂಕರರ ಪ್ರತಿಮೆಯು ಸುಮಾರು 2.12 ಅಡಿ ಎತ್ತರವಿದ್ದು, ಕಾರ್ಯೋತ್ಸರ್ಗ ಭಂಗಿಯಲ್ಲಿದೆ. ಪ್ರತಿಮೆಯ ಎಡ-ಬಲಗಳಲ್ಲಿ ಯಕ್ಷ ಹಾಗೂ ಯಕ್ಷಿಣಿಯರ ಸುಂದರವಾದ ಹಾಗೂ ಅಲಂಕಾರಿಕ ಬಿಂಬವಿದೆ, ತೀರ್ಥಂಕರರ ತಲೆಮೇಲೆ ಐದು ಹೆಡೆಯ ಸರ್ಪವಿದೆ, ಅದರ ಮೇಲೆ ಮುಕ್ಕೊಡೆ ಇದ್ದು, ಸುತ್ತಲೂ ಸುಂದರವಾಗಿ ಪ್ರಭಾವಳಿಯನ್ನು ಕೆತ್ತಲಾಗಿದೆ.
ನಿಷಧಿ ಶಾಸನ ಸ್ಥಾಪಿಸಲಾಗಿತ್ತು :
ಬಿದಿರೆಯಲ್ಲಿ ಕ್ರಿಸ್ತ ಶಕ 974 ಇಸವಿಯ ಒಂದು ನಿಷದಿ ಶಾಸನವನ್ನು ಸ್ಥಾಪಿಸಲಾಗಿದ್ದು, ಈ ಗ್ರಾಮದಲ್ಲಿ ಗುರುಪೀಠವಿದ್ದ ಉಲ್ಲೇಖವೂ ಇದೆ. ಒಟ್ಟಾರೆ ಬಿದರೆಯಲ್ಲಿ ಜೈನಧರ್ಮ ಅತ್ಯಂತ ಪ್ರಾಚೀನ ಕಾಲದಿಂದಲೂ ಇದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಕೇತ್ರ ಕಾರ್ಯದಲ್ಲಿ ಶಾಸನದ ಪಠ್ಯವನ್ನು ತೆಗೆಯಲು ಅನುವು ಮಾಡಿದ ಬಸದಿಯ ಪಂಡಿತ ಸುಪಾರ್ಶ್ವಜೈನ್ ಮತ್ತು ಜೈನ ಬಸದಿಯ ಅಧ್ಯಕ್ಷರಾದ ಬಿ.ಎಲ್.ಸುಮತಿಕುಮಾರ್ ಅವರಿಗೆ ಶಾಸನದ ಪಠ್ಯವನ್ನು ಓದಿ ಕೊಟ್ಟಂತಹ ಡಾ.ಎಂ.ಜಿ.ಮಂಜುನಾಥ್ ಅವರಿಗೆ ವಂದನೆಗಳು. ಬಿದಿರೆಯಲ್ಲಿ ಇನ್ನಷ್ಟೂ ಕ್ಷೇತ್ರ ಅಧ್ಯಯನ ನಡೆಸಿದರೆ ಸಾಕಷ್ಟು ಮಾಹಿತಿಗಳು ದೊರಕಬಹುದು.
-ಸ್ಫೂರ್ತಿಜೈನ್, ಯುವ ಸಂಶೋಧಕಿ
ಶಾಸನ ಪಾಠ : 1ನೇ ಸಾಲು: ಶ್ರೀ ಬಿದಿರೆಯ ಸ್ಥಳದಲ್ಲಿ ಶ್ರೀಸುಪಾರ್ಶ್ವನಾಥ ಬಿಂಬ,
2ನೇ ಸಾಲು : ವ ನಯಸೇನ ದೇವರು ಸ್ಥಾಪಿಸಿದರು.
ಶಾಸನದ ಸಾರಾಂಶ : ಶ್ರೀ ಬಿದಿರೆ ಸ್ಥಳದಲ್ಲಿ ಸುಪರ್ಶ್ವನಾಥ ತೀರ್ಥಂಕರರ ಪ್ರತಿಮೆಯನ್ನು ನಯಸೇನ ದೇವರು ಸ್ಥಾಪಿಸಿದರು ಎಂದು ಶಾಸನವು ಹೇಳುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
