ಗುಬ್ಬಿ :
ವಾಸ್ತವವಾಗಿ ಇಂದಿಗೂ ನಾನು ಜೆಡಿಎಸ್ ಶಾಸಕನಾಗಿಯೇ ಇದ್ದೇನೆ. ಪಕ್ಷದಿಂದ ಹೊರದಬ್ಬುವ ನಿಲುವನ್ನು ವರಿಷ್ಠರು ತೋರಿದ ಹಿನ್ನಲೆಯಲ್ಲಿ ಮುಂದೆ ನಡೆಯಲಿರುವ ಜಿಪಂ, ತಾಪಂ ಚುನಾವಣೆ ಕುರಿತ ಗೊಂದಲವನ್ನು ನನ್ನ ಕಾರ್ಯಕರ್ತರು ಮತ್ತು ಬೆಂಬಲಿಗರು ಇತ್ಯರ್ಥ ಮಾಡಲಿದ್ದಾರೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಬ್ಯಾಡಿಗೆರೆ ಗ್ರಾಮದಲ್ಲಿ ಹೇಮೆ ನೀರಿನಿಂದ ಅಜ್ಜಮ್ಮನಕೆರೆ ತುಂಬಿದ ಹಿನ್ನಲೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದ ಅವರು ವಿಧಾನ ಪರಿಷತ್ತಿನ ಚುನಾವಣೆಗೂ ಸಹ ಇದೇ ನಿಲುವು ಮುಂದುವರೆಯಲಿದೆ. ನನ್ನ ಎಲ್ಲಾ ನಡೆಯನ್ನು ಪ್ರಾಮಾಣಿಕ ಕಾರ್ಯಕರ್ತರೇ ಅಂತಿಮಗೊಳಿಸಲಿದ್ದಾರೆ ಎಂದರು.
ಸಾ.ರಾ.ಮಹೇಶ್ ಹೇಳಿದರೂ ಮಾತಾಡಲಿಲ್ಲ :
ನನ್ನಿಂದ ದೂರವಾದ 3-4 ಮಂದಿ ಅಪಪ್ರಚಾರ ನಡೆಸುತ್ತಿದ್ದಾರೆ ಈ ನಡೆಯಿಂದ ಕ್ಷೇತ್ರದ ಜನರನ್ನು ವಿಚಲಿತಗೊಳಿಸಲಾಗದು. ಜೆಡಿಎಸ್ ಪಕ್ಷದ ಬಾಗಿಲು ಮುಚ್ಚಿದೆ ಎಂದು ಹೇಳಿರುವ ವರಿಷ್ಠರು ನನ್ನ ಕಡೆಗಣಿಸಿದ್ದಾರೆ. ನನ್ನನ್ನು ಆಚೆಗೆ ಹಾಕುವ ಉದ್ದೇಶ ಹೊಂದಿರುವಾಗ ನಾನೇ ಮೇಲೆ ಬಿದ್ದು ಹೋದ್ರು ಕತ್ತು ಹಿಡಿದು ನೂಕುತ್ತಾರೆ. ಅವರ ಮನೆಯ ಸೀಮಂತ ಕಾರ್ಯಕ್ರಮದಲ್ಲೂ ಮಾತನಾಡಿಸಲಿಲ್ಲ. ರೇವಣ್ಣನವರ ಮನೆಯಲ್ಲಿ ಸಾ.ರಾ.ಮಹೇಶ್ ಕುಮಾರಣ್ಣನಿಗೆ ಮಾತನಾಡಲು ಹೇಳಿದರೂ ನನ್ನ ಮಾತನಾಡಿಸಲಿಲ್ಲ. ಇದಾದ ನಂತರ ನಡೆದ ಪಕ್ಷದ ಕಾರ್ಯಾಗಾರದಲ್ಲಿ ನನ್ನ ನೋಡಲೇ ಇಲ್ಲ. ಇಷ್ಟೆಲ್ಲಾ ಘಟನೆ ನಡೆದ ನಂತರವೂ ಇನ್ಯಾವ ಪ್ರಯತ್ನ ಮಾಡುವ ಅಗತ್ಯವಿಲ್ಲ. ನನ್ನ ಮುಂದಿನ ನಡೆಯನ್ನು ಶೀಘ್ರದಲ್ಲೇ ಕಾರ್ಯಕರ್ತರು ನಿರ್ಧರಿಸಲಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಜೆ.ಎಂ.ನರಸಿಂಹಮೂರ್ತಿ, ರಮೇಶ್, ಮಂಜುನಾಥ್, ಮುಖಂಡರಾದ ಕೆ.ಆರ್.ವೆಂಕಟೇಶ್, ರಾಜಣ್ಣ, ಸೀನಪ್ಪ ಇತರರು ಇದ್ದರು.
ಕುಮಾರಣ್ಣನ ಬಳಿ ಎರಡು ಕರ್ಚಿಫ್ ಇರುತ್ತೆ :
ಮತ್ತೊಂದು ಈ ವರ್ಷ ಉತ್ತಮ ಮಳೆ ಬಂದ ಹಿನ್ನಲೆಯಲ್ಲಿ ಎಲ್ಲಾ ಕೆರೆ-ಕಟ್ಟೆಗಳು ತುಂಬಿದೆ. ಹಾಗಲವಾಡಿ ಭಾಗದಲ್ಲಿ ಮಳೆ ಬಂದರೂ ಅಂತರ್ಜಲ ವೃದ್ಧಿಗೆ ಅವಶ್ಯ 22 ಚೆಕ್ ಡ್ಯಾಮ್ ನಿರ್ಮಿಸಿದ್ದರ ಫಲ ಇಂದು ಕೊಳವೆಬಾವಿಗಳು ರೀಚಾರ್ಜ್ ಆಗುತ್ತಿವೆ. ಈ ಜೊತೆಗೆ 30 ವರ್ಷಗಳ ನಂತರ ತುಂಬಿರುವ ಅಜ್ಜಮ್ಮನಕೆರೆಯು ಸುತ್ತಲಿನ 15 ಗ್ರಾಮಗಳ ರೈತರ ಕೃಷಿಗೆ ನೀರುಣಿಸಲಿದೆ. ಈ ಕೆರೆಗೆ ಹೇಮೆ ಹರಿಸಲು ರೈತರಿಂದಲೇ ಹಣ ಸಂಗ್ರಹಿಸಿ ನಿರ್ಮಾಣವಾದ ನಾಲೆಗೆ ನಾನು ವೈಯಕ್ತಿಕ ಹಣ ನೀಡಿದ್ದೆ ಎಂದ ಅವರು ಕುಮಾರಸ್ವಾಮಿ ಅವರು ತಮ್ಮ ಕರ್ಚಿಫ್ ನೀಡಿ ಗ್ಲಿಜರಿನ್ ಇದೆಯೇ ಎಂದು ತೋರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿ ಅವರ ಬಳಿ ಮತ್ತೊಂದು ಕರ್ಚಿಫ್ ಇರುತ್ತೆ ಬಿಡಿ ಎಂದು ವ್ಯಂಗ್ಯವಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/07/Gubbi-sr-srinivas-vas.jpg)