ಪ್ರವಾಸಿಗರ ಭದ್ರತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ; ಎಚ್‌ಕೆ ಪಾಟೀಲ್

ಬೆಂಗಳೂರು:

    ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ಇಸ್ರೇಲಿ ಮಹಿಳೆ ಹಾಗೂ ಹೋಮ್‌ ಸ್ಟೇ ಒಡತಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ನಡೆದಿರುವುದು ದುರದೃಷ್ಟಕರ. ಇಂತಹ ಘಟನೆಗಳು ಮರುಕಳಿಸದಂತೆ ಪ್ರವಾಸಿಗರ ಭದ್ರತೆಯನ್ನು ಬಲಪಡಿಸುವ ಮಾರ್ಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಸೋಮವಾರ ಹೇಳಿದ್ದಾರೆ.

   ಈ ಬಗ್ಗೆ ಚರ್ಚಿಸಲು ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಹಿರಿಯ ಅಧಿಕಾರಿಗಳ ಸಭೆ ಕರೆಯುವಂತೆ ಮನವಿ ಮಾಡುವುದಾಗಿ ಪಾಟೀಲ್ ತಿಳಿಸಿದರು.

   ‘ಹಂಪಿ ಮತ್ತು ಸುತ್ತಮುತ್ತ ಇಂತಹ ಅಪರಾಧ ನಡೆದಿರುವುದು ತುಂಬಾ ದುರದೃಷ್ಟಕರ. ವಾಸ್ತವವಾಗಿ, ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಸಂತ್ರಸ್ತರಿಗೆ ಧೈರ್ಯ ತುಂಬಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸುವ ಕುರಿತು ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ. ಈ ರೀತಿಯ ಘಟನೆಗಳು ಎಂದಿಗೂ ಮರುಕಳಿಸದಂತೆ ನಾವು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.

   ಹಂಪಿ ಬಳಿಯ ಆನೆಗುಂಡಿ ಪ್ರದೇಶದಲ್ಲಿ ಮಾದಕ ದ್ರವ್ಯ ಮತ್ತು ಗಾಂಜಾ ದುರುಪಯೋಗದ ಆರೋಪದ ಕುರಿತು ಮತ್ತು ಸರ್ಕಾರವು ಭದ್ರತಾ ಕ್ರಮಗಳನ್ನು ಮರುಪರಿಶೀಲಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಘಟನೆಯು ಭಾವನಾತ್ಮಕವಾಗಿ ನಮಗೆ ಘಾಸಿಯನ್ನುಂಟುಮಾಡಿದೆ. ನಾವು ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಮತ್ತು ಹೋಂಸ್ಟೇಗಳು, ರೆಸಾರ್ಟ್‌ಗಳು ಇತ್ಯಾದಿಗಳಲ್ಲಿ ತೆಗೆದುಕೊಂಡಿರುವ ಭದ್ರತೆ ಮತ್ತು ಇತರ ಕ್ರಮಗಳನ್ನು ಮರುಪರಿಶೀಲಿಸುವ ಅಗತ್ಯವಿದ್ದರೆ ಅದನ್ನು ಮಾಡುತ್ತೇವೆ. ಸರ್ಕಾರ ಖಂಡಿತವಾಗಿಯೂ ಅವುಗಳನ್ನು ಪರಿಗಣಿಸುತ್ತದೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ’ ಎಂದು ಪಾಟೀಲ್ ಹೇಳಿದರು.

   ಪೊಲೀಸರ ಪ್ರಕಾರ, ಗುರುವಾರ ರಾತ್ರಿ ಹಂಪಿ ಬಳಿ ಸಂಗೀತ ಕೇಳುತ್ತಾ ಕುಳಿತಿದ್ದಾಗ 27 ವರ್ಷದ ಇಸ್ರೇಲಿ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮಹಿಳೆಯರೊಂದಿಗೆ ಇದ್ದ ಮೂವರು ಪುರುಷ ಪ್ರವಾಸಿಗರ ಮೇಲೂ ಹಲ್ಲೆ ನಡೆಸಿ ಕಾಲುವೆಗೆ ತಳ್ಳಲಾಗಿದೆ ಮತ್ತು ಅವರಲ್ಲಿ ಒಬ್ಬನ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪರಾಧದಲ್ಲಿ ಭಾಗಿಯಾಗಿರುವ ಮೂವರು ಪುರುಷರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link