ತುಮಕೂರು:
ಪೌರಾಣಿಕ ಕಥೆಗಳು ಎಂದಿಗೂ ಹಳೆಯದಾಗುವುದಿಲ್ಲ. ಹಾಗಾಗಿ ಮಹಾಭಾರತ, ರಾಮಾಯಣ ಮುಂತಾದ ಕಥೆಗಳನ್ನು ಆಧರಿಸಿ ಹಲವು ಸಿನಿಮಾ ಮತ್ತು ಧಾರಾವಾಹಿಗಳು ಮೂಡಿಬರುತ್ತಲೇ ಇವೆ.
ಇತ್ತೀಚೆಗಷ್ಟೇ ‘ಆದಿಪುರುಷ್’ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನಾಗಿ ಕಾಣಿಸಿಕೊಂಡಿದ್ದಾರೆ. ಓಮ್ ರಾವತ್ ನಿರ್ದೇಶನದ ಈ ಚಿತ್ರಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ಸರಿಯಾದ ರೀತಿಯಲ್ಲಿ ರಾಮಾಯಣದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಿಲ್ಲ ಎಂದು ಹಲವರು ತಕರಾರು ತೆಗೆದಿದ್ದಾರೆ. ಇದರ ಬೆನ್ನಲ್ಲೇ ಬೇರೆ ಸಿನಿಮಾಗಳ ಬಗ್ಗೆಯೂ ಚರ್ಚೆ ಆಗುತ್ತಿದೆ.
ರಾಮಾಯಣದ ಕಥೆಯನ್ನು ಆಧರಿಸಿ ಇನ್ನೂ ಕೆಲವು ಚಿತ್ರಗಳು ಸಿದ್ಧ ಆಗುತ್ತಿವೆ. ಆ ಪೈಕಿ ಹೆಚ್ಚು ನಿರೀಕ್ಷೆ ಮೂಡಿಸಿರುವುದು ‘ಹನುಮಾನ್’ ಸಿನಿಮಾ. ಈ ಚಿತ್ರ ಕೂಡ ‘ಆದಿಪುರುಷ್’ ರೀತಿಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ ಎಂಬುದು ವಿಶೇಷ. ಹೆಸರೇ ಸೂಚಿಸುವಂತೆ ಇದರಲ್ಲಿ ಆಂಜನೇಯನ ಕಥೆ ಪ್ರಮುಖವಾಗಿ ಇರಲಿದೆ.
‘ಹನುಮಾನ್’ ಚಿತ್ರಕ್ಕೆ ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೇಜ ಸಜ್ಜಾ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ, ವೆನ್ನೆಲಾ ಕಿಶೋರ್ ಮುಂತಾದವರು ಕೂಡ ‘ಹನುಮಾನ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 2022ರ ನವೆಂಬರ್ ತಿಂಗಳಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಗಲಿದೆ.
ಪೌರಾಣಿಕ ಕಥಾಹಂದರ ಇಟ್ಟುಕೊಂಡು ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ‘ಆದಿಪುರುಷ್’ ರೀತಿ ಟೀಕೆಗೆ ಒಳಗಾಗಬೇಕಾಗುತ್ತದೆ. ಈಗ ‘ಹನುಮಾನ್’ ಸಿನಿಮಾ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ವಿಶೇಷ ಏನೆಂದರೆ ಇದು ಸಂಪೂರ್ಣ ಪೌರಾಣಿಕ ಕಥೆಯನ್ನು ಹೊಂದಿರುವ ಸಿನಿಮಾ ಅಲ್ಲ. ಹನುಮಂತನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಬೇರೆಯದೇ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುವುದು ಎಂಬುದಕ್ಕೆ ಟೀಸರ್ನಲ್ಲಿ ಸುಳಿವು ಸಿಕ್ಕಿದೆ. ಆ ಬಗ್ಗೆ ಇನ್ನಷ್ಟೇ ಹೆಚ್ಚಿನ ಅಪ್ಡೇಟ್ ಸಿಗಬೇಕಿದೆ.
‘ಹನುಮಾನ್’ ಸಿನಿಮಾದ ಕೆಲಸಗಳು ತಡವಾಗುತ್ತಿವೆ. ಇದರಲ್ಲಿ ಸಾಕಷ್ಟು ಗ್ರಾಫಿಕ್ಸ್ ಬಳಕೆ ಆಗುತ್ತಿದೆ. ಮೂಲಗಳ ಪ್ರಕಾರ 1600 ಶಾಟ್ಗಳಲ್ಲಿ ವಿಎಫ್ಎಕ್ಸ್ ಇರಲಿದೆ. ಅದಕ್ಕಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಸಮಯ ಹಿಡಿಯುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಬಜೆಟ್ ಹೆಚ್ಚಾಗುತ್ತಿದೆ. ಸಿನಿಮಾದ ಬಿಸ್ನೆಸ್ ಮಾತುಕತೆ ಕೂಡ ಅಂತಿಮವಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/06/hanuman4.jpg)