ಹೈದರಾಬಾದ್:
ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹರಿ ಹರ ವೀರ ಮಲ್ಲು’ ಜುಲೈ 24ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಹಲವು ದಿನಗಳ ಬಳಿಕ ಪವನ್ ತೆರೆ ಮೇಲೆ ಬರಲಿದ್ದು, ಫ್ಯಾನ್ಸ್ ಕಣ್ತುಂಬಿಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯಭರದಿಂದ ಸಾಗಿದೆ. ಇದೀಗ ನಿರ್ದೇಶಕ ಜ್ಯೋತಿ ಕೃಷ್ಣ ‘ಹರಿ ಹರ ವೀರ ಮಲ್ಲು’ ಚಿತ್ರದ ಕುರಿತಾಗಿ ಅಪರೂಪದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರ ಪಾತ್ರವನ್ನು ನಟರಾದ ಎನ್ಟಿಆರ್ ಮತ್ತು ಎಂಜಿಆರ್ ಅವರಿಂದ ಸ್ಫೂರ್ತಿ ಪಡೆದು ರಚಿಸಿದ್ದಾಗಿ ಹೇಳಿದ್ದಾರೆ. ಎನ್ಟಿಆರ್ ಮತ್ತು ಎಂಜಿಆರ್ರಂತಹ ಐಕಾನಿಕ್ ವ್ಯಕ್ತಿಗಳಂತೆಯೇ ಪವನ್ ಕೂಡ ಅದ್ಭುತ ಕಲಾವಿದ ಎಂದು ಹೇಳಿದ್ದಾರೆ.
ಜ್ಯೋತಿ ಕೃಷ್ಣ ಮಾತನಾಡಿ, ”ಧರ್ಮಪರ, ಜನರ ಪರವಾಗಿರುವ ಎಂಬ ಪವನ್ ಕಲ್ಯಾಣ್ ಅವರ ಇಮೇಜ್ ಅನ್ನು ಗಮನದಲ್ಲಿಟ್ಟುಕೊಂಡು ‘ಹರಿಹರ ವೀರಮಲ್ಲು’ ಚಿತ್ರದಲ್ಲಿನ ಪಾತ್ರವನ್ನು ಎಚ್ಚರಿಕೆಯಿಂದ ಕಟ್ಟಿಕೊಡಲಾಗಿದೆ. ಮುಖ್ಯಮಂತ್ರಿ ಆದ ನಂತರವೂ ಎಂಜಿಆರ್ ಸಂದೇಶಪೂರ್ಣ ಸಿನಿಮಾಗಳನ್ನು ಮಾಡುತ್ತಾ ನಟನಾ ಜೀವನವನ್ನು ಮುಂದುವರಿಸಿದ್ದರು. ಈ ಅಂಶ ನನಗೆ ಸ್ಫೂರ್ತಿ ನೀಡಿತು. ಅದಕ್ಕಾಗಿಯೇ ‘ಹರಿಹರ ವೀರಮಲ್ಲು’ ಚಿತ್ರದಲ್ಲಿ ‘ಮಾತು ಕೇಳಿ’ ಎಂಬ ಶಕ್ತಿಯುತ, ಚಿಂತನಶೀಲ ಹಾಡನ್ನು ಸೇರಿಸಿದ್ದೇವೆ. ಈ ಹಾಡಿನ ಸಾರ ಪವನ್ ಅವರ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕತೆ, ಧರ್ಮವನ್ನು ಅಳವಡಿಸಿಕೊಳ್ಳುವುದನ್ನು ತಿಳಿಸುತ್ತದೆ. ಈ ಹಾಡು ಪ್ರೇಕ್ಷಕರ ಮೇಲೆ ಉತ್ತಮ ಪ್ರಭಾವ ಬೀರಿದೆʼʼ ಎಂದು ಹೇಳಿದರು.
ʼʼನಟನಾಗಿ ಎನ್ಟಿಆರ್ ಅವರ ಅದ್ಭುತ ಅಭಿನಯ ಪೌರಾಣಿಕ, ಜಾನಪದ ಚಿತ್ರಗಳಲ್ಲಿ ಪ್ರತಿಬಿಂಬಿತವಾಗಿದೆ. ವಿಶೇಷವಾಗಿ ರಾಮ, ಕೃಷ್ಣ ಪಾತ್ರಗಳಲ್ಲಿ ಅವರು ಒಂದಾದ ರೀತಿ ಶಾಶ್ವತವಾಗಿ ಉಳಿದಿದೆ. ಎನ್ಟಿಆರ್ ಶ್ರೀರಾಮನಾಗಿ ಅದ್ಭುತವಾಗಿ ನಟಿಸಿದ್ದಾರೆ. ಈ ಅಂಶದಿಂದ ಸ್ಫೂರ್ತಿ ಪಡೆದು ‘ಹರಿಹರ ವೀರಮಲ್ಲು’ ಚಿತ್ರದಲ್ಲಿ ಪವನ್ಗಾಗಿ ಬಿಲ್ಲು-ಬಾಣವನ್ನು ವಿನ್ಯಾಸಗೊಳಿಸಿದ್ದೇವೆ. ಪವನ್ ಕಲ್ಯಾಣ್ ಅವರ ಶಕ್ತಿಯನ್ನು ಸೂಚಿಸಲು, ನ್ಯಾಯಕ್ಕಾಗಿ ಹೋರಾಡುವ, ಧರ್ಮವನ್ನು ಎತ್ತಿಹಿಡಿಯುವ ಸಂಕೇತವಾಗಿ ಈ ಆಯುಧಗಳನ್ನು ವಿನ್ಯಾಸಗೊಳಿಸಿದ್ದೇವೆ. ತಾನು ಸ್ಕ್ರಿಪ್ಟ್ ಬರೆಯುವಾಗ ಜನರು ಪವನ್ ಕಲ್ಯಾಣ್ ಅವರನ್ನು ನಾಯಕನಾಗಿ ನೋಡುತ್ತಿದ್ದಾರೆ ಎಂದು ಅರಿತುಕೊಂಡೆ. ಕಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತೆ ಪ್ರತಿ ದೃಶ್ಯವನ್ನು ವಿಶೇಷವಾಗಿ ಸೃಷ್ಟಿಸಬೇಕೆಂದುಕೊಂಡಿದ್ದೆʼʼ ಎಂದು ಜ್ಯೋತಿ ಕೃಷ್ಣ ತಿಳಿಸಿದರು.
ʼಹರಿ ಹರ ವೀರ ಮಲ್ಲು’ವಾಗಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕನಾಗಿ ಪವರ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. 300 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ವೀರಮಲ್ಲು ಆಗಿ ಪವನ್ ಕಲ್ಯಾಣ್ ಲುಕ್, ಗೆಟಪ್ ಭರವಸೆ ಮೂಡಿಸಿದೆ. ಜ್ಯೋತಿ ಕೃಷ್ಣ ಮತ್ತು ಕ್ರಿಶ್ ಜಗರ್ಲಮುಡಿ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬಂದಿದೆ.
ಚಿತ್ರದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ಆದಿತ್ಯ ಮೆನನ್, ಶುಭಲೇಖ ಸುಧಾಕರ್ ತಾರಾಗಣದಲ್ಲಿದ್ದಾರೆ. ರೋಚಕ ಯುದ್ಧದ ಸನ್ನಿವೇಶಗಳು ಚಿತ್ರದಲ್ಲಿದೆ. ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಎ. ದಯಾಕರ್ ರಾವ್ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಎಂ.ರತ್ನಂ ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ, ಮನೋಜ್ ಪರಮಹಂಸ ಛಾಯಾಗ್ರಹಣ ಚಿತ್ರಕ್ಕಿದೆ.








