ಚಂಡೀಗಢ:
ಎರಡನೇ ಬಾರಿ ಹರಿಯಾಣ ಮುಖ್ಯಮಂತ್ರಿಯಾಗಿರುವ ನಯಾಬ್ ಸಿಂಗ್ ಸೈನಿ ಅವರು ಶುಕ್ರವಾರ ನಡೆದ ತಮ್ಮ ಮೊದಲ ಕ್ಯಾಬಿನೆಟ್ ಸಭೆಯಲ್ಲಿ, ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದೀರ್ಘಕಾಲದ ಮೂತ್ರಪಿಂಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆ ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ.ಈ ಮೂಲಕ ಆಡಳಿತಾರೂಢ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಮೊದಲ ಭರವಸೆಯನ್ನು ಈಡೇರಿಸಿದೆ.
ತಮ್ಮ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸೈನಿ, “ನಾನು ಅಧಿಕಾರ ವಹಿಸಿಕೊಂಡ ನಂತರ ಸಹಿ ಮಾಡಿದ ಮೊದಲ ಫೈಲ್ ಮೂತ್ರಪಿಂಡ ರೋಗಿಗಳಿಗೆ ಸಂಬಂಧಿಸಿದೆ. ಚುನಾವಣೆ ವೇಳೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಡಯಾಲಿಸಿಸ್ಗೆ ತಿಂಗಳಿಗೆ 20,000 ರಿಂದ 25,000 ವೆಚ್ಚವಾಗುತ್ತದೆ. ಈಗ, ಹರಿಯಾಣ ಸರ್ಕಾರವೇ ಆ ವೆಚ್ಚವನ್ನು ಭರಿಸಲಿದೆ ಎಂದು ಹೇಳಿದರು.ಪರಿಶಿಷ್ಟ ಜಾತಿಗಳೊಳಗೆ ಒಳ ಮೀಸಲಾತಿ ನೀಡುವುದಕ್ಕೆ ರಾಜ್ಯಗಳು ಸಾಂವಿಧಾನಿಕವಾಗಿ ಅಧಿಕಾರ ಹೊಂದಿವೆ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಜಾರಿಗೆ ತರಲು ತಮ್ಮ ಸಂಪುಟ ಸಭೆ ನಿರ್ಧರಿಸಿದೆ ಎಂದು ಸೈನಿ ಹೇಳಿದರು.
“ಮೊದಲ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಇಂದಿನಿಂದಲೇ ಜಾರಿಗೆ ತರಲು ನಮ್ಮ ಕ್ಯಾಬಿನೆಟ್ ನಿರ್ಧರಿಸಿದೆ” ಎಂದು ಅವರು ತಿಳಿಸಿದರು.