ಹತ್ರಾಸ್‌ ಪ್ರಕರಣ : ಪೊಲೀಸರೆದುರು ಶರಣಾದ ಮುಖ್ಯ ಆರೋಪಿ …!

ದೆಹಲಿ: 

    ಜು.2 ರಂದು ಹತ್ರಾಸ್ ಸತ್ಸಂಗದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಪ್ರಮುಖ ಆರೋಪಿ ದೇವ್ ಪ್ರಕಾಶ್ ಮಧುಕರ್ ದೆಹಲಿಯಲ್ಲಿ ಪೊಲೀಸರೆದುರು ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ.

    ಮಧುಕರ್ ಈ ಸತ್ಸಂಗದ ಮುಖ್ಯ ಸೇವಾದಾರರಾಗಿದ್ದರು, ಎಫ್ಐಆರ್ ನಲ್ಲಿ ಈತನ ಹೆಸರನ್ನು ಮಾತ್ರ ದಾಖಲಿಸಲಾಗಿದೆ. ಮಧುಕರ್ ಅವರ ವಕೀಲ ಎಪಿ ಸಿಂಗ್ ವೀಡಿಯೋ ಸಂದೇಶವೊಂದನ್ನು ಪ್ರಕಟಿಸಿದ್ದು, ತಮ್ಮ ಕಕ್ಷಿದಾರರು ದೆಹಲಿಯಲ್ಲಿ ಶರಣಾಗಿದ್ದಾರೆ ಎಂದು ಹೇಳಿದ್ದಾರೆ. ಮಧುಕರ್ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು. 

    ಗುರುವಾರದವರೆಗೆ, ಕಾಲ್ತುಳಿತ ನಡೆದ ಸೂರಜ್‌ಪಾಲ್ ಅಲಿಯಾಸ್ ನಾರಾಯಣ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಅವರ ಸತ್ಸಂಗದ ಸಂಘಟನಾ ಸಮಿತಿಯ ಸದಸ್ಯರಾಗಿದ್ದ ಇಬ್ಬರು ಮಹಿಳಾ ಸ್ವಯಂಸೇವಕರು ಸೇರಿದಂತೆ 6 ಜನರನ್ನು ಪ್ರಕರಣದಲ್ಲಿ ಬಂಧಿಸಲಾಗಿತ್ತು.

    ಏತನ್ಮಧ್ಯೆ, ಹತ್ರಾಸ್ ಕಾಲ್ತುಳಿತದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ವಿಶೇಷ ತನಿಖಾ ತಂಡವು ಇದುವರೆಗೆ 90 ಜನರ ಹೇಳಿಕೆಗಳನ್ನು ದಾಖಲಿಸಿದೆ ಎಂದು ಎಸ್‌ಐಟಿ ಮುಖ್ಯಸ್ಥ ಅನುಪಮ್ ಕುಲಶ್ರೇಷ್ಠ ಶುಕ್ರವಾರ ತಿಳಿಸಿದ್ದಾರೆ.