ಬೆಂಗಳೂರು:
ಸರಣಿ ಹೃದಯಾಘಾತದ ಪ್ರಕರಣಗಳಿಂದ ಜನತೆಯಲ್ಲಿ ಆತಂಕ ಮೂಡಿದ್ದು, ಹೃದಯದ ಆರೋಗ್ಯದ ಪರೀಕ್ಷೆಗೆ ಮುಂದಾಗಿರುವ ಬೆಳವಣಿಗೆ ರಾಜ್ಯಾದ್ಯಂತ ಕಂಡುಬಂದಿದೆ. ಈ ನಡುವೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಕಳೆದೊಂದು ವಾರದಿಂದ 2 ಸಾವಿರಕ್ಕೂ ಅಧಿಕ ಜನ ದಿನನಿತ್ಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಪ್ರತಿ ದಿನ 700ರಿಂದ 1 ಸಾವಿರ ಜನ ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದರು. ಇದೀಗ 2 ಸಾವಿರಕ್ಕೂ ಅಧಿಕ ಜನ ಬರುತ್ತಿದ್ದಾರೆ.
ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ ನಿಜವಾದ ರೋಗಿಗಳಿಗೆ ಸಮಸ್ಯೆ ಶುರುವಾಗಿದೆ. ಸ್ಟೆಂಟ್ ಹಾಕಿಸಿಕೊಂಡ ರೋಗಿಗಳು ಸರದಿಯಲ್ಲಿ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಚೆಕ್ ಅಪ್ ಮಾಡಿಸಿಕೊಳ್ಳಬೇಕಿರುವ ರೋಗಿಗಳು ಕಾಯುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಜಯದೇವ ಆಸ್ಪತ್ರೆ ಆಡಳಿತ 4 ಹೆಚ್ಚುವರಿ ಕೌಂಟರ್ ತೆರೆದಿದೆ. ಅಷ್ಟೇ ಅಲ್ಲ ವೈದ್ಯರಿಗೆ, ಸಿಬ್ಬಂದಿಗಳಿಗೆ 1 ಗಂಟೆ ಮುಂಚಿತವಾಗಿ ಬರಲು ತಿಳಿಸಿದೆ. ಜೊತೆಗೆ ಆಸ್ಪತ್ರೆ ಒಪಿಡಿ 9 ಗಂಟೆ ಬದಲಾಗಿ 8 ಗಂಟೆಗೆ ತೆರೆಯುತ್ತಿದೆ.
ಮಕ್ಕಳಲ್ಲೂ ಹೃದಯಾಘಾತ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ 15 ವರ್ಷದ ಮಕ್ಕಳಿಗೆ ಹೃದಯ ತಪಾಸಣೆಗೆ ಆರೋಗ್ಯ ಇಲಾಖೆ ಸೂಚಿಸಿದೆ. ಪ್ರಿಸ್ಕೂಲ್ನಲ್ಲಿರುವ ಕೆಲವರಿಗೆ ಹಾರ್ಟ್ ಹೋಲ್ಸ್ ಕಂಡುಬರುತ್ತಿದೆ. 12ರಿಂದ 14 ವರ್ಷದೊಳಗೆ ಮಕ್ಕಳಿಗೆ ಹೈಪರ್ ಟ್ರೋಫಿಯಾ ಸಮಸ್ಯೆ ಇರುತ್ತದೆ. ಹೀಗಾಗಿ ಮೊದಲೇ ಹೃದಯ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ರವೀಂದ್ರನಾಥ್ ಸಲಹೆ ನೀಡಿದ್ದಾರೆ.
ಜನವರಿಯಲ್ಲಿ ಹಳೆಯ ಮತ್ತು ಹೊಸ ರೋಗಿಗಳು ಸೇರಿದಂತೆ ಒಟ್ಟು 9,708 ಜನರು ಹೊರರೋಗಿ ವಿಭಾಗಕ್ಕೆ ಭೇಟಿ ನೀಡಿದ್ದಾರೆ. ಈ ಪೈಕಿ 686 ರೋಗಿಗಳು (ಶೇಕಡಾ 7.06) ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಜೂನ್ನಲ್ಲಿ ಒಟ್ಟು 11,056 ಭೇಟಿಗಳಲ್ಲಿ 798 ರೋಗಿಗಳು (7.21%) ದಾಖಲಾಗಿದ್ದಾರೆ. ದಾಖಲಾಗುವಿಕೆ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ
“ಮಾಧ್ಯಮಗಳಲ್ಲಿ ಸುದ್ದಿಗಳನ್ನು ನೋಡಿ ಜನರು ಆತಂಕದಿಂದ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಮತ್ತು ಹೃದಯ ಸಂಬಂಧಿತ ಚಿಕಿತ್ಸೆಗಾಗಿ ವಿನಂತಿಸುತ್ತಿದ್ದಾರೆ. ಅವರ ವೈದ್ಯಕೀಯ ಸ್ಥಿತಿಯ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ವಾರಗಳ ಹಿಂದೆ 400 ರೋಗಿಗಳಿದ್ದ ದೈನಂದಿನ ಹೊರರೋಗಿ ರೋಗಿಗಳ ಸಂಖ್ಯೆ ಈಗ 600ಕ್ಕೆ ಏರಿದೆ. ಗ್ಯಾಸ್ಟ್ರಿಕ್ನಿಂದ ಎದೆಯುರಿ ಇದ್ದರೂ ಸಹ ಅವರು ಆತಂಕದಿಂದ ಬರುತ್ತಿದ್ದಾರೆ” ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಮತ್ತು ಉಸ್ತುವಾರಿ ವೈದ್ಯಕೀಯ ಅಧೀಕ್ಷಕ ಡಾ. ವಿರೇಶ್ ಪಾಟೀಲ್ ಹೇಳಿದರು.
ಶಾಲಾ ಪಠ್ಯದಲ್ಲಿ ಹೃದಯ ಆರೋಗ್ಯದ ಬಗ್ಗೆ ಮಾಹಿತಿ ಅಳವಡಿಸುವ ಚಿಂತನೆ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳೂ ತಿಳಿಸಿವೆ. ಸದಾ ಕೆಲಸದ ಒತ್ತಡದಲ್ಲಿ ಇರುವ ಟೆಕ್ಕಿಗಳಿಗೆ ವಾರ್ಷಿಕವಾಗಿ ಹೃದಯದ ಆರೋಗ್ಯ ತಪಾಸಣೆಗೆ ತಜ್ಞರು ಸೂಚಿಸಿದ್ದಾರೆ.








