ಉಡುಪಿ ಜಿಲ್ಲೆಯ ಕಾಲೇಜ್ ಒಂದರಲ್ಲಿ ನಡೆದ ಹಿಜಾಬ್ ವಿದ್ಯಮಾನ, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯೇ ಬಗೆಹರಿಸಬಹುದಾಗಿದ್ದ ವಿಷಯ ಇಂದು ವಿಶ್ವ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಊರೆಲ್ಲಾ ಅದೇ ಚರ್ಚೆ, ಮಕ್ಕಳು ಮತ್ತು ಶಿಕ್ಷಣದ ವಿಚಾರವಾಗಿರುವುದರಿಂದ ಬಹುಬೇಗ ಸಾರ್ವಜನಿಕರಿಗೆ ಇದು ಕನೆಕ್ಟ್ ಆಗಿಹೋಗಿದೆ.
ಇದು ಎಷ್ಟರ ಮಟ್ಟಿಗೆ ಎಂದರೆ, ಮೊದಲು ನಿಮ್ಮ ದೇಶದ ಸಮಸ್ಯೆಗಳನ್ನು ನೋಡಿಕೊಳ್ರಪ್ಪಾ ಅಂದರೆ, ಇಲ್ಲಾ ಎಂದು ಪಾಕಿಸ್ತಾನ ಸರಕಾರ ಭಾರತೀಯ ಹೈಕಮಿಷನರಿಗೆ ಬುಲಾವ್ ನೀಡಿ, ಮಾಹಿತಿಯನ್ನು ಪಡೆದುಕೊಳ್ಳುತ್ತದೆ.
ಪ್ರಪಂಚದ ಖ್ಯಾತಿವೆತ್ತ ಆಂಗ್ಲ, ಉರ್ದು ವಾಹಿನಿಗಳು ಇದನ್ನು ಪ್ರೈಂ ಟೈಂನಲ್ಲಿ ಈ ವಿಚಾರಕ್ಕೆ ಆದ್ಯತೆಯನ್ನು ನೀಡುತ್ತದೆ. ಬಿಜೆಪಿ, ಇದಕ್ಕೆ ಟೂಲ್ ಕಿಟ್ಟಿನ ಮುಂದುವರಿದ ಭಾಗ ಎಂದು ಹೆಸರಿಡುತ್ತದೆ. ಇದೊಂದು ಆಯಾಮ..
ಸ್ಕೂಲ್/ಕಾಲೇಜಿಗೆ ಬರುವ ತನಕ ಬುರ್ಖಾ/ಸ್ಕಾರ್ಫ್/ಹಿಜಾಬ್ ಧರಿಸಿಕೂಂಡು ಬಂದು, ತರಗತಿಯಲ್ಲಿ ಹಾಜರಾಗುವ ವೇಳೆ ಸಮವಸ್ತ್ರ ನಿಯಮ ಪಾಲಿಸುವುದನ್ನು (ಖಾಸಗಿ ಶಿಕ್ಷಣ ಸಂಸ್ಥೆ ಹೊರತು ಪಡಿಸಿ) ನಾವೆಲ್ಲಾ ನೋಡಿದ್ದೇವೆ. ಎಲ್ಲೂ ಹಿಜಾಬ್ ಬಂದಿಲ್ಲ, ಕೇಸರಿ ಶಲ್ಯದ ಸುದ್ದಿಯಿಲ್ಲ, ನೀಲಿ ರುಮಾಲೂ ಇಲ್ಲವೇ ಇರಲಿಲ್ಲಾ..
ಹಿಂದೂ, ಮುಸ್ಲಿಂ ಎನ್ನುವ ಬೇಧಭಾವವಿಲ್ಲದೇ ವಿದ್ಯೆಯಾಯಿತು, ಸ್ನೇಹಿತರಾಯಿತು ಎಂದು ತಮ್ಮದೇ ಲೋಕದಲ್ಲಿದ್ದ ಆ ಆರು ಮಕ್ಕಳು ಇಂದು ನಮಗೆ ನ್ಯಾಯಬೇಕು ಎಂದು ಹೈಕೋರ್ಟ್ ಮೆಟ್ಟಲೇರುತ್ತಾರೆ ಅಂದರೆ, ಇದರ ಹಿಂದೆ ಷಡ್ಯಂತ್ರ ಇರದೇ ಇರುತ್ತಾ ಎನ್ನುವ ಕನಿಷ್ಠ ಲೋಕಜ್ಣಾನ ಇಲ್ಲದೇ ಇರುವುವರು ಈ ಭೂಮಿಯಲ್ಲಿ ಯಾರಿದ್ದಾರೋ?
ತ್ರಿಸದಸ್ಯ ಪೀಠಕ್ಕೆ ಹಿಜಾಬ್ ವಿವಾದ ವರ್ಗಾವಣೆ
ಏಕಸದಸ್ಯ ಪೀಠದಿಂದಲೇ ತೀರ್ಪು ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ತ್ರಿಸದಸ್ಯ ಪೀಠಕ್ಕೆ ಹಿಜಾಬ್ ವಿವಾದ ವರ್ಗಾವಣೆ ಎಂದಾಗ, ಇನ್ಯಾವಾಗ ವಿಚಾರಣೆ/ಆದೇಶ ಎನ್ನುವ ಗೊಂದಲ ಜನರಲ್ಲಿತ್ತು. ಆದರೆ, ಏಕಸದಸ್ಯ ಪೀಠದಿಂದ ವರ್ಗಾವಣೆಯಾದ ಕೇಸ್, ಮರುದಿನವೇ ತ್ರಿಸದಸ್ಯ ಪೀಠ ಕೈಗೊಳ್ಳುತ್ತೆ ಎಂದಾಗ ಜನರಲ್ಲಿ ಮತ್ತೆ ನಿರೀಕ್ಷೆ ಹೆಚ್ಚಾಯಿತು.
ಹಾಗಾಗಲಿಲ್ಲ, ತ್ರಿಸದಸ್ಯ ಪೀಠವೂ ವಿಚಾರಣೆಯನ್ನು ಫೆಬ್ರವರಿ ಹದಿನಾಲ್ಕಕ್ಕೆ ಮುಂದೂಡಿತು. ಆದರೆ, ಮುಂದೂಡುವ ಮುನ್ನ, ಅಲ್ಲಿಯವರೆಗೆ ಧಾರ್ಮಿಕ ವಸ್ತ್ರಸಂಹಿತೆ ಶಾಲಾ, ಕಾಲೇಜಿನಲ್ಲಿ ಇಲ್ಲ ಎನ್ನುವ ಆದೇಶವನ್ನು ಹೊರಡಿಸಿತು. ಈ ಆದೇಶ, ಒಂದು ಕೋಮಿಗೆ ಹಿನ್ನಡೆಯ ಮುನ್ಸೂಚನೆಯೇ ಎನ್ನುವುದು ಖಂಡಿತವಾಗಿಯೂ ಎದುರಾಗುವ ಪ್ರಶ್ನೆ.
ಅಹಿಂದ ಸಮಾವೇಶ/ಲಿಂಗಾಯತ ಪ್ರತ್ಯೇಕ ಧರ್ಮ
ಅಭಿವೃದ್ದಿ ವಿಚಾರವನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಲು ಸಾಧ್ಯವಾಗದಿದ್ದಾಗ, ಧಾರ್ಮಿಕ ವಿಚಾರಕ್ಕೆ ರಾಜಕೀಯ ಪಕ್ಷಗಳು ಮುಂದಾಗುತ್ತವೆ ಎನ್ನುವುದಕ್ಕೆ ಹಿಂದಿನ ಅಹಿಂದ ಸಮಾವೇಶ/ಲಿಂಗಾಯತ ಪ್ರತ್ಯೇಕ ಧರ್ಮ, ಈಗಿನ ಮುಜರಾಯಿ ದೇವಾಲಯಗಳ ಸ್ವಾಯತ್ತತೆ ವಿಚಾರ ಉದಾಹರಣೆಯಾಗಬಲ್ಲದು (ಹಿಂದಿನ ಸರಕಾರಗಳು ಇದನ್ನು ಒಪ್ಪದೇ ಇರಬಹುದು).
ಆಡಳಿತ ಪಕ್ಷದ ವಿರುದ್ದ ಗುರುತರ ಆರೋಪಗಳು ಕೇಳಿ ಬರುತ್ತಿರುವ ಈ ವೇಳೆ ಮತ್ತು ಸಾರ್ವಜನಿಕರ ಗಮನವನ್ನು ಬೇರೆಕಡೆಗೆ ಸೆಳೆಯಲೆಂದೇ ಹಿಜಾಬ್ ಅನ್ನು ಮುನ್ನಲೆ ತರಲಾಗಿದೆ ಎನ್ನುವ ವಿಚಾರ ಈಗ ಚರ್ಚೆಯ ವಿಷಯವಾಗಿದೆ.
ಆಡ್ವಾಣಿ ರಥಯಾತ್ರೆ, ನಿನ್ನೆಮೊನ್ನೆಯ ಮೋದಿಯ ಗಂಗಾ ಕಾರಿಡರ್
ಧಾರ್ಮಿಕ ವಿಚಾರಗಳು ಮುನ್ನಲೆಗೆ ಬಂದಾಗ ಅಥವಾ ತಂದಾಗ ಅದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿರುವುದಕ್ಕೆ ಕಳೆದ ಕೆಲವು ದಶಕಗಳ ರಾಜಕೀಯ ಇತಿಹಾಸವೇ ಸಾಕ್ಷಿ. ಅದು ಆಡ್ವಾಣಿ ರಥಯಾತ್ರೆ ಇರಬಹುದು,
ನಿನ್ನೆಮೊನ್ನೆಯ ಮೋದಿಯ ಗಂಗಾ ಕಾರಿಡರ್ ಉದ್ಘಾಟನೆ ಇರಬಹುದು. ಬಿಜೆಪಿಗೆ ಅತ್ಯಂತ ಪ್ರಮುಖವಾಗಿರುವ ಉತ್ತರ ಪ್ರದೇಶದ ಚುನಾವಣೆಯ ಹೊಸ್ತಿಲಲ್ಲಿ ಕರ್ನಾಟಕದ ಹಿಜಾಬ್ ವಿಚಾರಕ್ಕೂ ಅಲ್ಲಿನ ಚುನಾವಣೆಗೂ ಸಂಬಂಧ ಇರುವ ಸಾಧ್ಯತೆ ಇದೆ ಅನ್ನಬಹುದೇ?
ಬೆಳ್ಳಿತಟ್ಟೆಯಲ್ಲಿ ಬಿಜೆಪಿಗೆ ಗರಿಗರಿ ಚಿನ್ನದಂತಹ ಹಿಂದೂ ವೋಟ್ ಬ್ಯಾಂಕ್
ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ನಮಗೆ ಮುಸ್ಲಿಂ ಹೆಣ್ಣು ಮಕ್ಕಳ ಜೀವನ ಮುಖ್ಯ, ಕೆಲವೊಂದು ಮತಾಂಧರು ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಮಾತನ್ನು ಪ್ರಧಾನಿಗಳು ಹೇಳುತ್ತಾರೆ.
ಇತ್ತ, ಹಿಜಾಬ್ ವಿಚಾರದಲ್ಲಿ ಹಿಂದೂಗಳು ಒಗ್ಗೂಡುತ್ತಿದ್ದಾರೆ, ಕರ್ನಾಟಕ ಕಾಂಗ್ರೆಸ್ಸಿನ ಮುಖಂಡರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಅಲ್ಲಿಗೆ, ಟೂಲ್ ಕಿಟ್ಟೋ, ಇನ್ನೊಂದೋ, ಬೆಳ್ಳಿತಟ್ಟೆಯಲ್ಲಿ ಬಿಜೆಪಿಗೆ ಗರಿಗರಿ ಚಿನ್ನದಂತಹ ಹಿಂದೂ ವೋಟ್ ಬ್ಯಾಂಕ್ ಸಿಕ್ಕಂತಾಗಿದೆ ಎನ್ನುವುದು ಮೇಲ್ನೋಟದ ಸದ್ಯದ ನಗ್ನಸತ್ಯವೇ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ