ಬೆಳಗಾವಿ:
“ಯಾವಾಗಲೂ ಘರ್ಜಿಸುವ ಹುಲಿಗಳೇ ಟಾಗ್ರೆಟ್ ಆಗುತ್ತವೆ. ಹನಿಟ್ರ್ಯಾಪ್ ವಿಷಯದಲ್ಲೂ ಘರ್ಜಿಸುವ ಹುಲಿಗಳನ್ನು ಟಾರ್ಗೆಟ್ ಮಾಡಿ, ಸಿಡಿಗಳನ್ನು ತೋರಿಸಿ ಹೆದರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಚಿವ ರಾಜಣ್ಣ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಕಾನೂನು ಸಲಹೆ ಮತ್ತು ತಜ್ಞರ ಅಭಿಪ್ರಾಯ ಪಡೆದು ಪೊಲೀಸರಿಗೆ ದೂರು ನೀಡಬೇಕು ಎಂದರು.
ಹನಿಟ್ರ್ಯಾಪ್ ವಿಚಾರದಲ್ಲಿ ದೂರು ನೀಡಿದ ನಂತರವೇ ತನಿಖೆ ನಡೆಯಲಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ. ರಾಜ್ಯ ಪೊಲೀಸರೇ ಪ್ರಕರಣದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲು ಸಮರ್ಥರಾಗಿದ್ದಾರೆ ಎಂದು ಅವರು ತಿಳಿಸಿದರು. ಹನಿಟ್ರ್ಯಾಪ್ ವಿಚಾರದಲ್ಲಿ ಯಾರೂ ಸಂಚು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರಾಜಕೀಯಕ್ಕಾಗಿ ಮಾತ್ರವಲ್ಲ. ಬ್ಲ್ಯಾಕ್ ಮೇಲ್ ಮತ್ತು ವ್ಯಾಪಾರ ವಿಷಯವಾಗಿಯೂ ಹನಿಟ್ರ್ಯಾಪ್ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸತೀಶ್ ಜಾರಕಿಹೊಳಿ ಉತ್ತರಿಸಿದರು.
ಈ ಹನಿಟ್ರ್ಯಾಪ್ ಪ್ರಕರಣದ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕು. ಯಾವ ಕಾರಣಕ್ಕೆ ಈ ಹನಿಟ್ರ್ಯಾಪ್ ನಡೆದಿದೆ ಎಂಬುದು ತನಿಖೆಯಿಂದ ತಿಳಿಯಬೇಕು. ಈ ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ನಿರ್ಧರಿಸುತ್ತಾರೆ ಎಂದರು.
ಇದಕ್ಕು ಮುನ್ನ ರಾಜ್ಯದಲ್ಲಿ ಕೇವಲ 40 ನಾಯಕರು ಅಲ್ಲ, ಕನಿಷ್ಠ 400 ಜನರನ್ನು ಹನಿಟ್ರ್ಯಾಪ್ಗೆ ಸಿಲುಕಿಸಲಾಗಿದೆ. ಬರೀ ರಾಜ್ಯದಿಂದ ಮಾತ್ರವಲ್ಲ, ದೆಹಲಿಯ ಅನೇಕ ನಾಯಕರು ಮತ್ತು ಅಧಿಕಾರಿಗಳನ್ನು ಕೂಡ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವರು ಹೇಳಿದ್ದರು.
