ಶಿವಮೊಗ್ಗ:
ಮಲೆನಾಡು ಭಾಗದಲ್ಲಿ ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಹೆಸರುವಾಸಿಯಾಗಿರುವ ಏಕೈಕ ಆಸ್ಪತ್ರೆ ಅದು ಎನ್ಯು ಆಸ್ಪತ್ರೆ. ಇನ್ನು ಮುಂದೆ ಎನ್ಯು ಆಸ್ಪತ್ರೆಯು ಮಲೆನಾಡು ಭಾಗದಾಚೆಗೂ ಯುರಾಲಜಿ ಮತ್ತು ನೆಫ್ರಾಲಜಿ ಸಂಬಂಧಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಯೋಜಿಸಿದ್ದು, ಶಿವಮೊಗ್ಗ ಕಿಡ್ನಿ ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳುತ್ತಿದೆ.
ಆರಂಭಿಕ ಪತ್ತೆ, ಅಗತ್ಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವ ಮೂಲಕ ಶಿವಮೊಗ್ಗ ಕಿಡ್ನಿ ಆಸ್ಪತ್ರೆಯು 2025ರ ಜಾಗತಿಕ ವಿಷಯವಾದ ‘ನಿಮ್ಮ ಮೂತ್ರಪಿಂಡಗಳು ಸರಿಯಾಗಿವೆಯೇ? ಆರಂಭಿಕವಾಗಿ ಪತ್ತೆ ಮಾಡುವ ಮೂಲಕ ಮೂತ್ರಪಿಂಡದ ಆರೋಗ್ಯವನ್ನು ರಕ್ಷಿಸಿ’ ಅನ್ನು ಧ್ಯೇಯವನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಅಂಡ್ ಟ್ರಾನ್ಸ್ ಪ್ಲಾಂಟ್ ಫಿಸಿಷಿಯನ್ ಡಾ. ಪ್ರವೀಣ್ ಮಾಳವದೆ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಕಿಡ್ನಿ ಆಸ್ಪತ್ರೆಯು 24X7 ಲಭ್ಯವಿರುವ ವೈದ್ಯಕೀಯ ತೀವ್ರ ನಿಗಾ ಘಟಕ (ಎಂಐಸಿಯು) ಸೇವೆಯನ್ನು ಆರಂಭಿಸಿದ್ದು, ಸಮರ್ಥ ವೈದ್ಯರ ತಂಡವು ಎಲ್ಲಾ ಸಮಯದಲ್ಲಿಯೂ ರೋಗಿಗೆ ಅಗತ್ಯವಿರುವ ಸಮಗ್ರ ಚಿಕಿತ್ಸಾ ಸೇವೆಗಳನ್ನು ನೀಡಲು ಸಜ್ಜಾಗಿರುತ್ತದೆ.
ವಿಶ್ವ ಮೂತ್ರಪಿಂಡ ದಿನ-2025ರ ಪ್ರಯುಕ್ತ ಕಿಡ್ನಿ ಆರೋಗ್ಯಕ್ಕೆ ಸಂಬಂಧಿಸಿದ ಬದ್ಧತೆಯನ್ನು ಮೆರೆಯಲು ಆಸ್ಪತ್ರೆಯು ಸಿದ್ಧವಾಗಿದೆ. ಕಿಡ್ನಿ ಆರೋಗ್ಯ ಕುರಿತು ಕಾಳಜಿ ಮೂಡಿಸಲು ಆಸ್ಪತ್ರೆಯು ಮುಂದಾಗಿದ್ದು, ಅಗತ್ಯ ಆರೋಗ್ಯ ಸೇವೆಗಳು ಎಲ್ಲರಿಗೂ ದೊರೆಯುವಂತೆ ಮಾಡಲು ನಿರ್ಧರಿಸಿದೆ. ರಕ್ತದ ಗುಂಪು ಹೊಂದಾಣಿಕೆಯಾಗದ (ಎಬಿಒ ಇನ್ಕಂಪ್ಯಾಟಿಬಲ್) ರೋಗಿಗಳಿಗೂ ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಮೂಲಕ ಕಿಡ್ನಿ ಕಾಳಜಿಯಲ್ಲಿ ನಮ್ಮ ಆಸ್ಪತ್ರೆಯು ಅತ್ಯಂತ ಕಾಳಜಿಯುತವಾಗಿ ಕೆಲಸ ಮಾಡುತ್ತಿದೆ. ಇನ್ನು ಮುಂದೆ ಶಿವಮೊಗ್ಗ ಕಿಡ್ನಿ ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳುತ್ತಿದ್ದು, ಕಿಡ್ನಿ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವುದು ನಮ್ಮ ಧ್ಯೇಯವಾಗಿದೆ ಎಂದರು.
ಏಪ್ರಿಲ್ 2023 ರಿಂದ ಕಿಡ್ನಿ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಯನ್ನು ಪ್ರಾರಂಭಿಸಿದ್ದು, ಶಿವಮೊಗ್ಗ ಕಿಡ್ನಿ ಆಸ್ಪತ್ರೆಯು (ಮುಂಚಿನ ಎನ್ಯು ಆಸ್ಪತ್ರೆ) ಈವರೆಗೆ 18 ಜನರ ಬಾಳಿಗೆ ದಾರಿದೀಪವಾಗಿದೆ. ಇದರಿಂದ ಮಲೆನಾಡು ಭಾಗದಲ್ಲಿ ಕಿಡ್ನಿ ಟ್ರಾನ್ಸ್ಪ್ಲಾಂಟ್ ಮತ್ತು ಕಿಡ್ನಿ ಆರೈಕೆಯಲ್ಲಿ ಸುಧಾರಿತ ಚಿಕಿತ್ಸೆಯನ್ನು ನೀಡುವ ಮೂಲಕ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ ಹೊಂದಿರುವ ರೋಗಿಗಳಿಗೂ ಹೊಸ ಭರವಸೆಯನ್ನು ತುಂಬಿದೆ.
ಶಿವಮೊಗ್ಗ ಕಿಡ್ನಿ ಆಸ್ಪತ್ರೆಯು (ಎನ್ಯು ಆಸ್ಪತ್ರೆ) ರಕ್ತದ ಗುಂಪು ಹೊಂದಾಣಿಕೆಯಾಗದವರಿಗೂ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಿದ ಮಲೆನಾಡು ಭಾಗದ ಮೊದಲ ಆಸ್ಪತ್ರೆಯಾಗಿದೆ. ಈ ವಿಶೇಷ ಸೌಲಭ್ಯವು ರೋಗಿಗಳಿಗೆ ವರದಾನವಾಗಿದ್ದು ಇದು ದಾನಿಗಳ ನೆರವಿಗೂ ದಾರಿಯಾಗಿದೆ ಮತ್ತು ಕಿಡ್ನಿ ವೈಫಲ್ಯದ ರೋಗಿಗಳಿಗೆ ವರದಾನವಾಗಿದೆ ಎಂದರು.
ಹಿರಿಯ ಸಲಹೆಗಾರರು ಹಾಗೂ ಯುರಾಲಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್ಪ್ಲಾಂಟ್ ಸರ್ಜನ್ ಡಾ. ಪ್ರದೀಪ್ ಎಂ.ಜಿ. ಮಾತನಾಡಿ, ಕಿಡ್ನಿ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಆರಂಭಿಕ ಪತ್ತೆ ಮತ್ತು ಅದಕ್ಕೆ ತಕ್ಕ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ. ಕಳೆದ ಐದು ವರ್ಷಗಳಿಂದ ಮಲೆನಾಡು ಪ್ರದೇಶದಲ್ಲಿ ನೆಫ್ರಾಲಜಿ ಮತ್ತು ಯುರಾಲಜಿ ಸಂಬಂಧಿತ ಚಿಕಿತ್ಸೆಯಲ್ಲಿ ನಿರತರಾಗಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ 18 ಕಿಡ್ನಿ ಟ್ರಾನ್ಸ್ಪ್ಲಾಂಟ್ ಅನ್ನು ಯಶಸ್ವಿಯಾಗಿ ಮಾಡಿದ್ದೇವೆ.
ನಮ್ಮ ಆಸ್ಪತ್ರೆಯು ಆರಂಭಿಕ ಹಂತದಲ್ಲೇ ರೋಗನಿರ್ಣಯ ಮಾಡುವ ಮೂಲಕ ರೋಗಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಎಲ್ಲಾ ವಯೋಮಾನದವರಲ್ಲೂ ಈ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹೀಗಾಗಿ ಕಿಡ್ನಿ ಆರೋಗ್ಯದ ಕಾಳಜಿವಹಿಸುವ ಅಗತ್ಯ ಎಲ್ಲರಿಗೂ ಇದೆ ಮತ್ತು ಎಲ್ಲರಲ್ಲೂ ಈ ಕುರಿತು ಜಾಗೃತಿ ಮೂಡುವ ಅಗತ್ಯವಿದೆ. ಈ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಜನರಲ್ಲಿ ಅರಿವು ಮೂಡಿಸಲು ಬದ್ಧರಾಗಿದ್ದೇವೆ ಎಂದರು.
ಎಲ್ಲರ ಸಮ್ಮುಖದಲ್ಲಿ ಶಿವಮೊಗ್ಗ ಕಿಡ್ನಿ ಆಸ್ಪತ್ರೆಯ ನೂತನ ಲೋಗೋ ಅನಾವರಣ ಮಾಡಲಾಯಿತು. ಈ ವೇಳೆ ಡಾ. ಕಾರ್ತಿಕ್ ಎಸ್.ಎಲ್ ಮತ್ತು ಡಾ. ಆಕಾಶ್ ಜೆ.ಎಸ್ ಉಪಸ್ಥಿತರಿದ್ದರು.
