ದಾವಣಗೆರೆ: ನೀರಿನಲ್ಲಿ ಹುಳ ಇದೆ ಎಂದ ವಿದ್ಯಾರ್ಥಿನಿಯರಿಗೆ ಹೀಗಾ ಹೇಳೋದು ವಾರ್ಡನ್

ದಾವಣಗೆರೆ

    ನಗರದ ಶಾಮನೂರಿನ ಜೆಎಚ್ ಪಟೇಲ್ ಬಡಾವಣೆ ವಿದ್ಯಾರ್ಥಿನಿಯರ ಹಾಸ್ಟೆಲ್​ಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಇಂದು(ಶನಿವಾರ) ವಿದ್ಯಾರ್ಥಿಗಳು ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್​ನಲ್ಲಿ ಇರುವ ತಾಲೂಕಾ ಸಮಾಜ ಕಲ್ಯಾಣ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಹಾಸ್ಟೆಲ್ ವಾರ್ಡನ್ ಬಗ್ಗೆ ಆಕ್ರೋಶ ಹೊರಹಾಕಿದ ವಿದ್ಯಾರ್ಥಿನಿ, ‘ನೀರಲ್ಲಿ ಹುಳು ಬಿದ್ದ ವಿಚಾರ ಹೇಳಿದ್ರೆ ಚಿಕನ್, ಮಟನ್ ತಿಂತೀರಾ ನಿಮಗೆ ಹುಳು ಯಾವ ಲೆಕ್ಕ ಎಂದು ವಾರ್ಡನ್ ಕೇಳುತ್ತಾರೆ.

   ಅಷ್ಟೇ ಅಲ್ಲ, ವಿದ್ಯಾರ್ಥಿನಿಯರ ನಡತೆ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ. ಇದರ ಜೊತೆಗೆ ಮೂರು ತಿಂಗಳಿಂದ ಕುಡಿಯುವ ನೀರು ಹಾಗೂ ಬಳಸಲು ನೀರಿಲ್ಲ. ಊಟದ ವ್ಯವಸ್ಥೆ ಕೂಡ ಸರಿಯಿಲ್ಲ ಎಂದು ಆರೋಪಿಸಿದರು. ಇನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಸುಡುಬಿಸಿಲಿನಲ್ಲಿ ಗಂಟೆಗಳಿಂದ ಹೋರಾಟ ಮಾಡುತ್ತಿದ್ದರೂ ತಾಲೂಕಾ ಸಮಾಜ ಕಲ್ಯಾಣ ಕಚೇರಿ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.