ಹುಳಿಯಾರು:
ಹುಳಿಯಾರು ಹೋಬಳಿ ದಬ್ಬಗುಂಟೆ-ರಾಮನಗರ ಗ್ರಾಮದ ನಡುವಿನ ಅಂದಾಜು 5 ಕೋಟಿ ರೂಪಾಯಿ ವೆಚ್ಚದ ನಾಲ್ಕು ಕಿಲೋಮೀಟರ್ ರಸ್ತೆ ಕಾಮಗಾರಿಗೆ ಸಣ್ಣ ನೀರಾವರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಗುದ್ದಲಿಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಅಂಬಾರಪುರ (ಕಾಲುವೆ ದಾರಿ) ಗ್ರಾಮದಲ್ಲಿ ಸುಮಾರು ಮೂರು ತಿಂಗಳಿನಿಂದ ಕುಡಿಯುವ ನೀರಿನ ಕೊಳವೆಬಾವಿ ನಿಂತು ಹೋಗಿದ್ದು ಅಲ್ಲಿನ ಗ್ರಾಮಸ್ಥರು ತೋಟಗಳಿಂದ ನೀರನ್ನು ತರುತ್ತಿದ್ದಾರೆ. ಈ ಬಗ್ಗೆ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರೂ ಅಧಿಕಾರಿಗಳು ಗಮನ ಮಾಡದೆ ನಿರ್ಲಕ್ಷಿಸಿದ್ದಾರೆ. ಕೂಡಲೇ ಅಂಬಾರಪುರಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆಯೂ ಹಾಗೂ ಹುಳಿಯಾರು ಹೋಬಳಿ ರಾಮನಗರ ಗ್ರಾಮದಲ್ಲಿ ದಿನನಿತ್ಯ ಸುತ್ತ ಆರೇಳು ಹಳ್ಳಿಗಳ ಜನ ಹಾಲನ್ನು ಹಾಕಲು ಬಂದು ಹೋಗುವುದಿದ್ದು, ಎಲ್ಲಾ ಗ್ರಾಮಸ್ಥರಿಗೂ ಅನುಕೂಲವಾಗುವ ದೃಷ್ಟಿಯಿಂದ ರಾಮನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವಂತೆಯೂ ಮನವಿ ಮಾಡಲಾಯಿತು.
ಅಲ್ಲದೆ ಹುಳಿಯಾರು ಹೋಬಳಿಯ ದಸೂಡಿ ಮತ್ತು ಹೊಯ್ಸಲಕಟ್ಟೆ ಪಂಚಾಯಿತಿಗೆ ಸೇರಿದ ಮರಾಠಿಪಾಳ್ಯ ಮತ್ತು ಕಾಲುವೆ ದಾರಿ ರಸ್ತೆ ತುಂಬಾ ದುಸ್ಥಿತಿಯಲ್ಲಿದ್ದು ಈ ರಸ್ತೆಯಲ್ಲಿ ಸಂಚರಿಸಲು ಸಮಸ್ಯೆಯಾಗುತ್ತಿದೆ. ದಿನನಿತ್ಯ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ರಸ್ತೆಯಲ್ಲಿ ಓಡಾಡುವುದರಿಂದ ಸುಮಾರು ಎರಡು ಕಿಲೋಮೀಟರ್ ನಷ್ಟು ಇರುವ ಈ ರಸ್ತೆಯನ್ನು ಡಾಂಬರ್ ರಸ್ತೆ ಮಾಡಿಕೊಡುವಂತೆಯೂ ಗ್ರಾಮಸ್ಥರಾದ ದಯಾನಂದ್, ದಿನೇಶ, ರಘುಕುಮಾರ್, ದಶರಥ ರಾವ್, ರೇಣುಕೋಜಿ ರಾವ್, ರಮೇಶ್ ರಾವ್ ,ನಾರಾಯಣರಾವ್, ಪರಮೇಶ್ವರ್, ಶ್ರೀನಿವಾಸರಾವ್, ಶಿವಾಜಿರಾವ್, ವೆಂಕಟೇಶರಾವ್, ಲೋಕೇಶ್, ಕಾಳಯ್ಯ, ವಿಶ್ವನಾಥ್, ದರ್ಶನ್ ಮತ್ತಿತರರ ಸಹಿಯುಳ್ಳ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ