ಹುಳಿಯಾರು :
ವಾರದಿಂದಲೂ ಸೂರ್ಯನ ಸುಳಿವೂ ಇಲ್ಲದೆ ಎಡಬಿಡದೆ ಬೀಳುತ್ತಿರುವ ತುಂತುರು ಮಳೆಯ ಜೊತೆಗೆ ಮೂಡ ಕವಿದ ವಾತಾವರಣದಿಂದಾಗಿ ಹುಳಿಯಾರು ಪಟ್ಟಣ ಸೇರಿದಂತೆ ವಿವಿಧೆಡೆ ಮಲೆನಾಡು ವಾತಾವರಣ ಸೃಷ್ಠಿಯಾಗಿ ಇಲ್ಲಿನ ನಿವಾಸಿಗಳಿಗೆ ಮಲೆನಾಡಿನ ಅನುಭವ ನೀಡುತ್ತಿದೆ.
ಹುಳಿಯಾರು ಪಟ್ಟಣ ಸೇರಿದಂತೆ ಬಹುತೇಕ ಊರುಗಳಲ್ಲಿ ಕಳೆದ ವಾರದಿಂದಲೂ ಬೆಳಗಿನ ಜಾವ ಜಡಿ ಮಳೆಯಾಗುತ್ತಿದೆ. ಅಲ್ಲದೆ ದಿನದಲ್ಲಿ ಹತ್ತಿಪ್ಪತ್ತು ಬಾರಿ ಐದು ನಿಮಿಷ ಸೋನೆ ಮಳೆಯಾಗುತ್ತಿದೆ. ಅಲ್ಲದೆ ಬೆಳಗ್ಗೆಯಿಂದ ಸಂಜೆವರೆವಿಗೂ ಮೋಡ ಕವಿದ ವಾತಾವರಣ ಇರುತ್ತದೆ. ಬಹುಮುಖ್ಯವಾಗಿ ವಾರದಿಂದ ಸೂರ್ಯನ ದರ್ಶನ ಭಾಗ್ಯವೇ ಸಿಗದೆ ಅಕ್ಷರಶಃ ಬೆಚ್ಚಗೆ ಹೊದ್ದು ಮಲಗುವಂತಹ ವಾತಾವರಣ ಇದೆ.
ತುಂತುರು ಮಳೆಯ ಪರಿಣಾಮ ಜನ ಜೀವನಕ್ಕೆ ತೊಂದರೆಯಾಗಿದೆ. ಜನರು ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೊರ ಬಂದರೂ ಕೊಡೆ, ರೇನ್ಕೋಟ್ ಹಾಗೂ ಸ್ವೆಟರ್ಗಳ ಮೊರೆ ಹೋಗುತ್ತಿದ್ದಾರೆ. ದ್ವಿಚಕ್ರವಾಹನಗಳ ಸಂಚಾರವೂ ಕಡಿಮೆಯಾಗಿದೆ. ಹಾಗಾಗಿ ವ್ಯಾಪಾರ ವಹಿವಾಟಿನ ಭರಾಟೆ ಇಲ್ಲದಾಗಿ ವ್ಯಾಪಾರಿಗಳಿಗೆ ಭಾರಿ ನಿರಾಸೆಯಾಗುತ್ತಿದೆ.
ವಾರದಿಂದಲೂ ಬೀಳುತ್ತಿರುವ ಮಳೆಯಿಂದಾಗಿ ತೆಂಗು ಮತ್ತು ಅಡಕೆ ತೋಟಗಳಿಗೆ ಜೀವಕಳೆ ಬಂದಿದ್ದು, ತೋಟವುಳ್ಳ ರೈತರಲ್ಲಿ ಮಂದಹಾಸ ಮೂಡಿಸಿದೆ. ಆದರೆ ಹೆಸರು ಮತ್ತು ಅಲಸಂದೆ ಬೆಳೆದ ರೈತರಿಗೆ ಭಾರಿ ತೊಂದರೆಯಾಗಿದ್ದು, ಮಳೆ ನಿಂತು ಸೂರ್ಯನ ಬಿಸಿಲು ಯಾವಾಗ ಬೀಳುತ್ತದೋ ಎಂದು ಕಾಯುತ್ತಿದ್ದಾರೆ. ನಿರಂತರವಾಗಿ ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಕೊಂಚ ಹಿನ್ನಡೆ ಉಂಟು ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/07/18HULIYAR2-scaled-e1626673368563.jpg)