ಹುಳಿಯಾರು :
ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಒಂದೇ ದಿನ ಏಳೆಂಟು ಕೊಳವೆಬಾವಿಗಳ ಕೇಬಲ್ ಕಳುವಾಗಿರುವ ಘಟನೆ ಜರುಗಿದೆ.
ಪೋಚಕಟ್ಟೆ, ದೊಡ್ಡಬಿದರೆ, ಚಿಕ್ಕಬಿದರೆ, ಕಲ್ಲಹಳ್ಳಿ, ಅವಳಗೆರೆ, ಭೈರಾಪುರ ಗ್ರಾಮಗಳ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆಬಾವಿಗಳ ಕೇಬಲ್ ಹಾಗೂ ಪೋಚಕಟ್ಟೆಯ ವಿರೂಪಾಕ್ಷಯ್ಯ, ಜಯರಾಮು ಅವರ ಜಮೀನಿನ ಕೊಳವೆಬಾವಿಯ ಕೇಬಲ್ ಕಳುವಾಗಿದೆ.
ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆಬಾವಿ ಕೇಬಲ್ ಕಳುವಾಗಿರುವುದರಿಂದ ಈ ಗ್ರಾಮಗಳಲ್ಲಿ ಹಬ್ಬಕ್ಕೆ ನೀರಿಲ್ಲದೆ ಜನರು ಪರದಾಡುವಂತಾಯಿತು. ಪರಿಸ್ಥಿತಿ ಅರಿತ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಅವರು ತಕ್ಷಣ ಹೊಸ ಕೇಬಲ್ ಅಳವಡಿಸಿ ನೀರಿನ ಪೂರೈಕೆ ಮಾಡಿದರು.
ಒಂದೊಂದು ಕೊಳವೆಬಾವಿಯಲ್ಲಿ 10-15 ಮೀಟರ್ ಕೇಬಲ್ ಕಳುವಾಗಿದ್ದು ಎಲ್ಲಾ ಕೊಳವೆಬಾವಿಯಿಂದ ಬರೋಬ್ಬರಿ 10 ಸಾವಿರ ರೂ. ಮೌಲ್ಯದ ಕೇಬಲ್ ಕಳುವಾಗಿದೆ. ಈ ರೀತಿ ಕೇಬಲ್ ಕಳವು ಪ್ರಕರಣ ಇಲ್ಲಿ ಸಾಮಾನ್ಯವಾಗಿದೆ.
ಕಳೆದ ಆರು ತಿಂಗಳ ಹಿಂದಷ್ಟೆ ಸ್ಟಾರ್ಟ್ರ್ ಸೇರಿದಂತೆ ಕೊಳವೆಬಾವಿಗಳ ಕೇಬಲ್ ಕಳುವಾಗಿತ್ತು. ಆಗ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಪೊಲೀಸರ ಭಯ ಇಲ್ಲದಿರುವುದರಿಂದ ಇಲ್ಲಿ ಕಳವು ಪ್ರಕರಣ ಸಾಮಾನ್ಯವಾಗಿದೆ ಎಂದು ಗ್ರಾಪಂ ಸದಸ್ಯ ಪೋಚಕಟ್ಟೆ ಜಯರಾಂ ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
