ವಿರೋಧಿ ಕಾಯ್ದೆ ಹಿಂಪಡೆದು ಸ್ವಾಮಿನಾಥನ್ ವರದಿ ಜಾರಿಗೆ ತನ್ನಿ

ಹುಳಿಯಾರು :

      ರೈತರ ಮೇಲೆ ಕಾಳಜಿಯಿದ್ದು ರೈತರಿಗೆ ನೆರವಾಗಬೇಕೆನ್ನುವ ತುಡಿತ ತಮ್ಮಲ್ಲಿದ್ದರೆ ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣ ಹಿಂಪಡೆದು ತಾವೇ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತನ್ನಿ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಅವರು ತಿಳಿಸಿದ್ದಾರೆ.

      ದೆಹಲಿಯಲ್ಲಿ ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಚಳುವಳಿಯನ್ನು ಬೆಂಬಲಿಸಿ ಹುಳಿಯಾರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅವರು ಮಾತನಾಡಿದರು.

      ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದು, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ, ಕಾರ್ಮಿಕರ ಕಾಯ್ದೆ ತಿದ್ದುಪಡಿ ಮಾಡಿ ಕಂಪನಿಗಳ ಮರ್ಜಿಗೆ ಒಳಗಾಗಿ ಖಾಸಗೀಕರಣ ಮಾಡುತ್ತಿದ್ದಾರೆ, ಇದನ್ನು ವಿರೋಧಿಸಿ ಕೊರೊನಾ ಲೆಕ್ಕಿಸದೆ ಆರೇಳು ತಿಂಗಳಿಂದ ದೇಶಾದ್ಯಂತ ರೈತರು ಬೀದಿಗಿಳಿದಿದ್ದಾರೆ, ದೆಹಲಿಯಲ್ಲಿ ರೈತರು ಕೊರೆಯುವ ಚಳಿಯಲ್ಲಿ ಎರಡು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇವರನ್ನು ಪ್ರಧಾನಿಗಳು ಖುದ್ದು ಬಂದು ಭೇಟಿಯಾಗದೆ ಚಳುವಳಿಯನ್ನು ಹತ್ತಿಕ್ಕುವ ಕುತಂತ್ರದ ಮಾರ್ಗವನ್ನ ಹುಡುಕುತ್ತಿದ್ದಾರೆ ಎಂದು ಆರೋಪಿಸಿದರು.

      ತಾಲೂಕು ರೈತ ಸಂಘದ ಗೌರವಾಧ್ಯಕ್ಷ ತಿಮ್ಮನಹಳ್ಳಿ ಲೋಕೇಶ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನರಲ್ಲಿ ಒಂದು ಆಶಾಭಾವನೆ ಇತ್ತು. ಹಳ್ಳಿಗಳು ಪಟ್ಟಣಗಳ ಹಾಗೆ ಸುಧಾರಣೆಯಾಗುವುದರ ಜತೆಗೆ ದೇಶ ರಾಮರಾಜ್ಯ ಆಗುತ್ತದೆ ಎಂಬ ನಮ್ಮ ಭ್ರಮೆ ಸುಳ್ಳಾಗಿದೆ. ಬಿಜೆಪಿ ಸರ್ಕಾರ ರೈತರನ್ನು ದಾಸರನ್ನಾಗಿ ಮಾಡಲು ಹೊರಟಿದೆ. ಇವರು ತಂದಿರುವ ಕಾನೂನುಗಳು ಇಡೀ ದೇಶದ ವ್ಯಾಪಾರ-ವಹಿವಾಟನ್ನು ಖಾಸಗಿ ಒಡೆತನಕ್ಕೆ ಕೊಟ್ಟು ನಮ್ಮನ್ನು ದಾಸರನ್ನಾಗಿ ಮಾಡುವ ಹುನ್ನಾರವಿದೆ ಎಂದು ಆರೋಪಿಸಿದರು.

      ತಮ್ಮಡಿಹಳ್ಳಿ ಮಲ್ಲಿಕಾರ್ಜುನ್, ರಂಗನಕೆರೆ ಮಂಜುನಾಥ್, ಕಂಪನಹಳ್ಳಿ ಮರುಳಸಿದ್ದಪ್ಪ, ಕಾಡಿನರಾಜ ನಾಗರಾಜು, ಹೂವಿನ ರಘು, ಪಾತ್ರೆ ಸತೀಶ್, ಬಂಗಾರಗೆರೆ ವಿರೂಪಾಕ್ಷಯ್ಯ, ಸೀಗೆಬಾಗಿ ಲೋಕೇಶ್, ದಾಸಪ್ಪ, ಚಂದ್ರಪ್ಪ, ಉಮೇಶ್, ಚನ್ನಬಸವಯ್ಯ, ಶ್ರೀಧರ್, ಶಂಭುಲಿಂಗಮೂರ್ತಿ, ದಸೂಡಿ ಜಗನ್ನಾಥ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link