ಹುಳಿಯಾರು :
ಹುಳಿಯಾರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ಮತ್ತು ತುಮಕೂರುಗಳಲ್ಲಿ ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಳಿಯಾರು ಹೋಬಳಿ ಬೆಳವಾಡಿ ಬಳಿ ಮಹಿಳೆಯು ತೋಟಕ್ಕೆ ಹೋಗಿದ್ದ ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧ ಹುಳಿಯಾರು ಪೊಲೀಸ್ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ತಿಪಟೂರು ಉಪವಿಭಾಗದ ಡಿ.ಎಸ್.ಪಿ.ರವರ ಮಾರ್ಗದರ್ಶನದಲ್ಲಿ ಚಿಕ್ಕನಾಯಕನಹಳ್ಳಿ ವೃತ್ತದ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಹುಳಿಯಾರು ಪೊಲೀಸ್ ಠಾಣಾ ಪಿ.ಎಸ್.ಐ. ಹಾಗೂ ಚಿ.ನಾ ಹಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ. ರವರ ತಂಡ ರಚಿಸಿ ತುಮಕೂರು ಟೌನ್ ಶಿರಾಗೇಟ್, ಪುಟ್ಟಸ್ವಾಮಯ್ಯನ ಪಾಳ್ಯ ಆಲಿಬಾಬ ಮತ್ತು ತಿಪಟೂರು ಟೌನ್ನ ಸಿರಾಜ್ ಅಲಿ ಅವರಿಬ್ಬರನ್ನು ಬಂಧಿಸಿದ್ದರು.
ಆರೋಪಿತರನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಹುಳಿಯಾರು ಪೋಲೀಸ್ ಠಾಣೆಯ 02 ಪ್ರಕರಣ, ಚಿ.ನಾ ಹಳ್ಳಿ ಠಾಣೆಯ 01 ಪ್ರಕರಣ. ತಿಪಟೂರು ನಗರ ಠಾಣೆಯ 02 ಪ್ರಕರಣ, ತುರುವೇಕೆರೆ ಪೊಲೀಸ್ ಠಾಣೆಯ 01 ಪ್ರಕರಣ, ಮತ್ತು ತುಮಕೂರಿನ ಹೊಸಬಡಾವಣೆ ಪೊಲೀಸ್ ಠಾಣೆಯ 02 ಪ್ರಕರಣ. ಒಟ್ಟು 08 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿತರಿಂದ ಒಟ್ಟು 17.52,750 ರೂ ಮೌಲ್ಯದ 369 ಗ್ರಾಂ ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದರಿ ಪ್ರಕರಣದ ಆರೋಪಿಗಳು ಮತ್ತು ಕಳವು ಮಾಲನ್ನು ಪತ್ತೆ ಹಚ್ಚಲು ಶ್ರಮಿಸಿದ ತಿಪಟೂರು ಪೊಲೀಸ್ ಉಪಾಧೀಕ್ಷಕರಾದ ಚಂದನ್ ಕುಮಾರ್, ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕರಾದ ವೀಣಾ ಎಸ್.ಎಂ., ಹುಳಿಯಾರು ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕೆ. ಟಿ, ಚಿಕ್ಕನಾಯಕನಹಳ್ಳಿ ಠಾಣೆಯ ಪಿಎಸ್ಐ ಹರೀಶ್. ಎಸ್ ಮತ್ತು ಸಿಬ್ಬಂದಿಗಳಾದ ಮಹಮ್ಮದ್ ಮಕ್ತಿಯಾರ್, ಚೇತನ್ ಕೆ.ವಿ. ಮಧುಸೂಧನ್. ನಾಗಭೂಷಣ್, ಮಂಜಪ್ಪ. ಟಿ, ಮಂಜುನಾಥ್, ಎಸ್ ಜೀವನ್ ಮತ್ತು ಚಿದಾನಂದ ರವರುಗಳ ತಂಡವನ್ನು ತುಮಕೂರು ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಡಾ.ಕೆ. ವಂಶಿಕೃಷ್ಣ ಅವರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ