ಹುಳಿಯಾರು : ವಿದ್ಯುತ್ ಶಾರ್ಟ್‍ನಿಂದ 2 ಬಣವೆ ಭಸ್ಮ

 ಹುಳಿಯಾರು :

      ವಿದ್ಯುತ್ ಶಾರ್ಟ್‍ನಿಂದಾಗಿ ರಾಗಿಹುಲ್ಲಿನ 2 ಬಣವೆಗಳು ಸುಟ್ಟು ಭಸ್ಮವಾದ ಘಟನೆ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಜರುಗಿದೆ.

      ಕೆಂಕೆರೆಗೆ ಗ್ರಾಮದ ಸಿದ್ಧಭೈರಪ್ಪ ಅವರಿಗೆ ಸೇರಿದ 4 ಟ್ರ್ಯಾಕ್ಟರ್ ಲೋಡ್ ರಾಗಿ ಹುಲ್ಲಿನ ಬಣವೆ ಹಾಗೂ ಕರಿಯಪ್ಪ ಅವರಿಗೆ ಸೇರಿದ 3 ಟ್ರ್ಯಾಕ್ಟರ್ ಲೋಡ್ ರಾಗಿ ಹುಲ್ಲಿನ ಬಣವೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಇವರಿಬ್ಬರೂ ಹೈನುಗಾರಿಕೆ ಮಾಡುತ್ತಿದ್ದು ರಾಸುಗಳಿಗಾಗಿ ತಮ್ಮ ಹುಲ್ಲಿನ ಜೊತೆಗೆ ಬೇರೆಯವರಿಂದ ಕೊಂಡು ದಾಸ್ತಾನು ಮಾಡಿದ್ದರು ಎನ್ನಲಾಗಿದೆ.

      ಬಣವೆಯ ಮೇಲಿದ್ದ 11 ಕೆವಿ ವಿದ್ಯುತ್ ಲೈನ್ ಶಾರ್ಟ್ ಆಗಿ ಬೆಂಕಿಯ ಕಿಡಿ ಬಣವೆಯ ಮೇಲೆ ಬಿದ್ದು ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರಾದರೂ ಅಷ್ಟರಲ್ಲಾಗಲೇ 2 ಬಣವೆಗಳ ಅಷ್ಟೂ ಹುಲ್ಲು ಸುಟ್ಟು ಭಸ್ಮವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link