ಹುಳಿಯಾರು :
ಹುಳಿಯಾರು ಕೆರೆ ದಡದಲ್ಲಿರುವ ನಿವಾಸಿಗಳಿಗೆ ಗೌಡಗೆರೆ ಬಳಿ ಪುನರ್ವಸತಿ ಕಲ್ಪಿಸುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ಶಂಕರಾಪುರ ಬಡಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಹುಳಿಯಾರು ಕೆರೆಗೆ ಹೇಮಾವತಿ ನೀರು ಬಂದರೆ ನಮ್ಮೆಲ್ಲ ಮನೆಗಳು ಜಲಾವೃತವಾಗುತ್ತವೆ. 10 ವರ್ಷಗಳಿಂದ ಜನಪ್ರತಿನಿಧಿಗಳಿಗೆ ಪುನರ್ವಸತಿಗಾಗಿ ಮನವಿ ಸಲ್ಲಿಸುತ್ತಿದ್ದರೂ ಸ್ಪಂದಿಸಿಲ್ಲ. ಸಣ್ಣ ನೀರಾವರಿ ಸಚಿವರಾದ ತಾವಾದರೂ ನಮ್ಮ ಮೇಲೆ ಕರುಣೆ ತೋರಿಸಿ ಎಂದು ಕೈ ಮುಗಿದು ಕೇಳಿಕೊಂಡರು.
ಕೆರೆ ಅಂಗಳ ಮಂಜೂರು ಅಸಾಧ್ಯ:
ಇದಕ್ಕೆ ಸ್ಪಂದಿಸಿದ ಸಚಿವರು ಸುಪ್ರಿಂ ಕೋರ್ಟ್ ಆದೇಶದನ್ವಯ ನಾನು ಸಣ್ಣ ನೀರಾವರಿ ಸಚಿವರಾಗಿದ್ದರೂ ಕೆರೆಯ ಒಂದಿಚ್ಚು ಭೂಮಿ ಮಂಜೂರು ಮಾಡಲು ಸಾಧ್ಯವಿಲ್ಲ. ನೀವು ಬೇರೆಡೆ ಒಪ್ಪಿದರೆ ಇನ್ನೊಂದು ತಿಂಗಳಲ್ಲಿ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡುತ್ತೇನೆ. ಆದರೆ ನೀವು ಹುಳಿಯಾರು ಕೆರೆ ದಡವೇ ಬೇಕೆಂದು ಪಟ್ಟು ಹಿಡಿದಿದ್ದೀರಿ. ನೀವು ಎಷ್ಟೇ ಪಟ್ಟು ಹಿಡಿದರೂ ಸಹ ಕೆರೆ ಅಂಗಳ ಮಂಜೂರು ಅಸಾಧ್ಯ. ಇನ್ನಾದರೂ ಪಟ್ಟು ಸಡಿಲಿಸಿದರೆ ಪುನರ್ವಸತಿಗೆ ಮುಂದಾಗುತ್ತೇನೆ ಎಂದರು.
ಹೇಮಾವತಿ ನೀರು ಇಷ್ಟರಲ್ಲಾಗಲೇ ಹುಳಿಯಾರು ಕೆರೆಗೆ ಹರಿಯಬೇಕಿತ್ತು. ಆದರೆ ನಮ್ಮ ಭಾಗದ ಹಂಚಿಕೆಯ ನೀರು ಮುಗಿದಿದ್ದರಿಂದ ಅನಿವಾರ್ಯವಾಗಿ ನಿಲ್ಲಿಸಲಾಗಿದೆ. ಈ ವರ್ಷದ ಮಳೆಗಾಲ ಮುಗಿದ ತಕ್ಷಣ ಪುನಃ ತಾಲೂಕಿಗೆ ಹೇಮೆ ಹರಿಸಲಾಗುವುದು. ಆಗ ಹುಳಿಯಾರು ಕೆರೆಗೆ ನೀರು ಹರಿಯುತ್ತದೆ. ಅಲ್ಲದೆ ಭದ್ರಾ ಯೋಜನೆಯ ಕಾಮಗಾರಿಯೂ ಸಹ ಇನ್ನೊಂದು ವರ್ಷದಲ್ಲಿ ಮುಗಿಯಲಿದ್ದು ನಂತರ ಭದ್ರಾ ನೀರೂ ಸಹ ಹುಳಿಯಾರು ಕೆರೆಗೆ ಹರಿಯುತ್ತದೆ. ಪರಿಣಾಮ ಪತ್ರಿ ವರ್ಷ ಕೆರೆಯಲ್ಲಿ ನೀರಿರುವುದರಿಂದ ನಿಮ್ಮೆಲ್ಲರಿಗೂ ವಾಸಕ್ಕೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.
ಶಂಕರಾಪುರ ನಿವಾಸಿಗಳು ನಾವು ಪುನರ್ವಸತಿಗೆ ಸಿದ್ಧರಿದ್ದು ನೀವೆಲ್ಲೇ ಹೇಳಿದರೂ ಅಲ್ಲಿಗೆ ತೆರಳಲು ಸಿದ್ಧರಿದ್ದೇವೆ ಎಂದರು. ಈ ಮಾತನ್ನು ಮೊದಲೇ ಹೇಳಿದ್ದರೆ ಇಷ್ಟರಲ್ಲಾಗಲೇ ಗೌಡಗೆರೆ ಗ್ರಾಮದ ಬಳಿಗೆ ನಿಮ್ಮನ್ನು ಸ್ಥಳಾಂತರ ಮಾಡುತ್ತಿದ್ದೆವು. ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳ ನಿಗದಿ ಮಾಡಿ ಸ್ಥಳಾಂತರಕ್ಕೆ ಮುಹೂರ್ತ ಸಹ ಫಿಕ್ಸ್ ಮಾಡಿದ್ದರು. ನೀವೆಲ್ಲರೂ ಈ ಸ್ಥಳ ಬಿಟ್ಟು ಕದಲುವುದಿಲ್ಲ ಎಂದಿದಕ್ಕೆ ಸ್ಥಳಾಂತರದ ಕಾರ್ಯ ನೆನಗುದಿಗೆ ಬಿದ್ದಿದೆ. ಹಾಗಲಿ ಚುನಾವಣೆ ಮುಗಿದ ಬಳಿಕ ಇದಕ್ಕೆ ಮತ್ತೆ ಚಾಲನೆ ನೀಡಿ ಹುಳಿಯಾರು ಕೆರೆ ಅಂಗಳ ಹಾಗೂ ಕೆಂಕೆರೆ ಗ್ರಾಮದ ವಸತಿ ರಹಿತರಿಗೆ ನಿವೇಶನ ಹಂಚುತ್ತೇವೆ. ನಂತರ ವಸತಿ ನಿಗಮದಿಂದ ಮನೆ ಗ್ರ್ಯಾಂಟ್ ಕೊಟ್ಟು ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡುವುದಾಗಿ ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಮಾಜಿ ಸದಸ್ಯ ಜಯಣ್ಣ, ನಿರಂಜನ್, ಹಾಲಿ ಸದಸ್ಯ ಕೇಶವಮೂರ್ತಿ, ತೆಂಗಿನ ನಾರು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಅಶೋಕ್ಬಾಬು, ಪಪಂ ಮಾಜಿ ಸದಸ್ಯ ಕೋಳಿಶ್ರೀನಿವಾಸ್, ಮುಖಂಡರಾದ ಕಾರ್ಗಿಲ್ ಸತೀಶ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
