ಹುಳಿಯಾರು : ಬಹಿಷ್ಕಾರದಿಂದ ಮುಕ್ತಿ ಕೊಡಿಸಲು ನಿವಾಸಿಗಳ ಮನವಿ

 ಹುಳಿಯಾರು :

      ದೇವಸ್ಥಾನದ ವಿಚಾರವಾಗಿ ನಮಗೆ ಹಾಕಿರುವ ಬಹಿಷ್ಕಾರದಿಂದ ಮುಕ್ತಿ ಕೊಡಿಸಿ ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡುವಂತೆ ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಗಚೀಹಳ್ಳಿಯ ಆರ್.ರಂಗನಾಥ್, ಕರಿರಂಗಯ್ಯ, ಕಾಂತರಾಜ್ ಮನವಿ ಮಾಡಿದ್ದಾರೆ.

      ಊರಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಸೇರಿದಂತೆ ದಾನಿಗಳಿಂದ ಹಣ ಸಂಗ್ರಹಿಸಲಾಗಿತ್ತು. ಮೊದಲೆ ನಿರ್ಧಾರವಾಗಿರುವಂತೆ 10 ಸಾವಿರ ರೂ.ಗಳಿಗಿಂತ ಹೆಚ್ಚು ದಾನ ನೀಡಿದ ದಾನಿಗಳ ಹೆಸರಿನ ಫಲಕ ಬರೆಸುವ ವಿಚಾರದಲ್ಲಿ ಕೆಲವರು ತಕರಾರು ತೆಗೆದರು. ಈ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಫಲಕ ಬರೆಸಬೇಕೆಂದು ಪಟ್ಟು ಹಿಡಿದ ನಮಗೆ ಬಹಿಷ್ಕಾರ ಹಾಕಲಾಗಿದೆಯಲ್ಲದೆ ಹಣ ಸಂಗ್ರಹಿಸಿದ್ದ ಕಮಿಟಿಯನ್ನೇ ಏಕಾಏಕಿ ವಜಾ ಮಾಡಿ ಮತ್ತೊಂದು ಕಮಿಟಿ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

      ಬಹಿಷ್ಕಾರ ಹಾಕಿರುವುದರಿಂದ ಊರಿನಲ್ಲಿ ನಮ್ಮ ಏಳೆಂಟು ಕುಟುಂಬದ ಸದಸ್ಯರನ್ನು ಯಾರೊಬ್ಬರೂ ಮಾತನಾಡಿಸುತ್ತಿಲ್ಲ. ದೇವಸ್ಥಾನಕ್ಕೆ ಪ್ರವೇಶ ಕೊಡುತ್ತಿಲ್ಲ. ನೀರು ಸೇರಿದಂತೆ ಅಗತ್ಯ ವಸ್ತುಗಳ ನೀಡದೆ ಅಸ್ಪøಶ್ಯತೆ ಜಾರಿಯಾಗಿದೆ. ಅಲ್ಲದೆ ಶಾಲೆಗೆ ಹೋಗುವ ನಮ್ಮ ಮಕ್ಕಳೊಂದಿಗೆ ಮಾತನಾಡದಂತೆಯೂ, ಆಟವಾಡದಂತೆಯೂ ಅವರನ ಮಕ್ಕಳಿಗೆ ಸೂಚಿಸಿದ್ದಾರೆ.

      ಮನೆ ದೇವರ ಜಾತ್ರಾ ಪೂಜೆಗೆ ತೆರಳಿದ್ದಾಗಲೂ ನಮ್ಮ ಪೂಜಾ ಸಾಮಗ್ರಿಗಳನ್ನು ಪ್ರತ್ಯೇಕವಾಗಿಟ್ಟು ಪೂಜೆ ಮಾಡುವಂತೆ ತಿಳಿಸಿದ್ದಾರೆ. ನಮ್ಮ ಮನೆಯಲ್ಲಿ ನಡೆಯುವ ಅಂತ್ಯಸಂಸ್ಕಾರ, ಶುಭ ಸಮಾರಂಭಗಳಿಗೂ ಹೋಗದಂತೆ ಹೇಳಿ ಸಾರ್ವಜನಿಕವಾಗಿ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

      ತಾತ ಮುತ್ತಾತನ ಕಾಲದಿಂದಲೂ ನಾವು ಇದೇ ಗ್ರಾಮದಲ್ಲಿ ವಾಸಿಸುತ್ತಿರುವುದರಿಂದ ಸಹಜವಾಗಿ ಗ್ರಾಮದ ಇತರ ನಿವಾಸಿಗಳೊಂದಿಗೆ ವಿಶ್ವಾಸ ಬೆಳಸಿಕೊಂಡಿದ್ದೇವೆ. ಹಾಗಾಗಿ ನಮ್ಮ ಕಷ್ಟಕ್ಕೆ ಕೆಲವರು ಬಹಿಷ್ಕಾರ ಬದಿಗಿತ್ತು ಸ್ಪಂಧಿಸಿದರಾದರೂ ಅವರಿಗೂ ಸಹ ದಂಡ ಹಾಕಿ ಭಯ ಹುಟ್ಟಿಸುತ್ತಿದ್ದಾರೆ. ಇದರಿಂದ ನಮ್ಮನ್ನು ಮಾತನಾಡಿಸು ಇಚ್ಚಿಸುವವರೂ ಭಯಗೊಂಡು ದೂರಹೋಗಿದ್ದಾರೆ. ಈ ಬಗ್ಗೆ ಕಂದಾಯ, ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಯಾರೊಬ್ಬರೂ ಸ್ಪಂಧಿಸಿಲ್ಲ. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮದಲ್ಲಿ ನಮ್ಮ ಮೇಲೆ ಹಾಕಿರುವ ಬಹಿಷ್ಕಾರ ತೆರವುಗೊಳಿಸಿ ಎಲ್ಲರೊಂದಿಗೂ ಸೌಹಾರ್ದತೆ ಮತ್ತು ಸಾಮರಸ್ಯರಿಂದ ಬಾಳುವಂತೆ ಮಾಡಲು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link