ಹುಳಿಯಾರು :
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಿದ ಪರಿಣಾಮವಾಗಿ ಬಸ್ ಸಂಚಾರ ಸ್ಥಗಿತಗೊಂಡು ಹುಳಿಯಾರಿನಲ್ಲಿ ಪ್ರಯಾಣಿಕರು ಹೊರ ಊರುಗಳಿಗೆ ಹೋಗಲು ಪರದಾಡಿದರು.
ಹುಳಿಯಾರು ಪಟ್ಟಣವು ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಗಳ ಗಡಿ ಗ್ರಾಮಗಳು ಅವಲಂಬಿತ ಪ್ರಮುಖ ವ್ಯಾಪಾರ ಕೇಂದ್ರ. ಅಲ್ಲದೆ ತಿಪಟೂರು, ಹಿರಿಯೂರು, ಶಿರಾ, ತುರುವೇಕೆರೆ, ಕಡೂರು ಸೇರಿದಂತೆ ಅನೇಕ ತಾಲೂಕು ಕೇಂದ್ರಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆಯುಳ್ಳ ಪಟ್ಟಣ. ಹಾಗಾಗಿ ನಿತ್ಯ ಸಾವಿರಾರು ಜನರು ಹುಳಿಯಾರಿಗೆ ಬಂದುಹೋಗುತ್ತಾರೆ.
ಆದರೆ ಸಾರಿಗೆ ಸಂಸ್ಥೆಯ ಬಸ್ ಸೇವೆ ಇಲ್ಲದೆ ಕಳೆದ 3 ದಿನಗಳಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಇನ್ನು ಕೊವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸೇವೆ ಇನ್ನೂ ಪರಿಪೂರ್ಣವಾಗಿ ಆರಂಭವಾಗದೆ ಖಾಸಗಿ ಬಸ್ಗಳ ಓಡಾಟವೂ ವಿರಳವಾಗಿದೆ. ಪರಿಣಾಮ ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಗಂಟೆಗಟ್ಟಲೆ ಕಾದರೂ ಬಸ್ಗಳು ಬಾರದೆ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಹೆಚ್ಚಿನ ತೊಂದರೆ ಅನುಭವಿಸಿದರು.
ದೂರದ ಗ್ರಾಮಗಳಿಗೆ ಆಟೋ ಬಾಡಿಗೆ ಕೊಡಲಾಗದೆ, ನಡೆಯಲು ಸಾಧ್ಯವಾಗದೆ ಪರಿತಪಿಸಿದ ಪ್ರಯಾಣಿಕರು, ಹತ್ತಿರದ ಗ್ರಾಮಗಳತ್ತ ಕಾಲ್ನಡಿಗೆಯಲ್ಲೇ ಹೊರಟರು. ದೂರದ ಸ್ಥಳಗಳಿಗೆ ಹೋಗುವ ಪ್ರಯಾಣಿಕರು, ಬೆರಳೆಣಿಕೆಯಷ್ಟು ಖಾಸಗಿ ಬಸ್ಗಳು ಹಾಗೂ ಸರಕು ಸಾಗಣೆ ಟೆಂಪೋಗಳನ್ನು ಅವಲಂಬಿಸಬೇಕಾಯಿತು.
ಈ ಅವಕಾಶವನ್ನು ಬಳಸಿಕೊಂಡ ಕೆಲವರು ಪ್ರಯಾಣಿಕರನ್ನು ಕುರಿಗಳಂತೆ ಖಾಸಗಿ ಬಸ್ಗಳಲ್ಲಿ, ಸರಕು ಸಾಗಾಣೆ ಟೆಂಪೋಗಳಲ್ಲಿ, ಆಟೋಗಳಲ್ಲಿ ತುಂಬಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಪ್ರಯಾಣಿಕರೂ ಸಹ ಕೊರೊನಾ ಬಗ್ಗೆ ಚಿಂತಿಸದೆ ತಮ್ಮ ಸ್ಥಳ ಸೇರಿಕೊಳ್ಳುವ ಧಾವಂತದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
