ಹುಳಿಯಾರು :
ಹುಳಿಯಾರು ಪಟ್ಟಣದ ಈರುಳ್ಳಿ ವ್ಯಾಪಾರಿ ಹಾರೂನ್ ಷರೀಫ್ ಅವರು ತಮ್ಮ ಅಂಗಡಿಯಲ್ಲಿ ಕಳೆದ ಭಾನುವಾರದಿಂದ ಖಾಸಗಿಯಾಗಿ ಆರಂಭಿಸಿರುವ ಈರುಳ್ಳಿ ಹರಾಜಿಗೆ ಬುಧವಾರ ಗುಜರಾತ್ ರೈತರು ಈರುಳ್ಳಿ ತಂದು ಅಚ್ಚರಿ ಮೂಡಿಸಿದರು.
ಬಹು ವರ್ಷಗಳಿಂದ ಈರುಳ್ಳಿ ವ್ಯಾಪಾರ ಮಾಡುತ್ತಿರುವ ಹಾರುನ್ ಷರೀಫ್ ಅವರು ಸ್ಥಳೀಯ ರೈತರಿಗೆ ಉತ್ತಮ ಬೆಲೆ ಸಿಗಲಿ ಹಾಗೂ ಸ್ಥಳೀಯ ವರ್ತಕರಿಗೆ ಗುಣಮಟ್ಟದ ಈರುಳ್ಳಿ ಸಿಗಲೆಂದು ಇಂತಹದೊಂದು ಯೋಜನೆ ರೂಪಿಸಿದ್ದರು.
ಕಳೆದ ಭಾನುವಾರದಿಂದ ಈ ಈರುಳ್ಳಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಪ್ರತಿ ಕ್ವಿಂಟಲ್ಗೆ 2 ಸಾವಿರ ರೂಪಾಯಿಯಿಂದ 4600 ರೂವರೆಗೆ ವ್ಯಾಪಾರವಾಯಿತು. ಬುಧವಾರ ಎರಡನೇ ಹರಾಜು ನಡೆದಿದ್ದು ಕ್ವಿಂಟಲ್ ಈರುಳ್ಳಿಗೆ 2 ಸಾವಿರ ರೂಪಾಯಿಯಿಂದ 4 ಸಾವಿರ ರೂಪಾಯಿಗೆ ವ್ಯಾಪಾರವಾಯಿತು.
ಭಾನುವಾರದ ನಡೆದ ಈರುಳ್ಳಿ ಹರಾಜಿಗೆ ಸ್ಥಳೀಯ ರೈತರು ಮಾತ್ರ ಬಂದಿದ್ದರು. ಆದರೆ ಬುಧವಾರ ನಡೆದ ಹರಾಜಿನಲ್ಲಿ ಗುಜರಾತ್ ರೈತರು ಆಗಮಿಸಿದ್ದರು. ಅಲ್ಲಿನ ಬಿಳಿ ಈರುಳ್ಳಿಯನ್ನು 250 ಚೀಲ ತಂದಿದ್ದರು. 2800 ರೂಪಾಯಿಯಿಂದ 2900 ರೂಪಾಯಿಗೆ ಮಾರಾಟವಾಯಿತು.
ಸ್ಥಳೀಯವಾಗಿ ಕೆಂಪು ಈರುಳ್ಳಿಯನ್ನು ಬೆಳೆಯುತ್ತಿದ್ದು ಈ ಈರುಳ್ಳಿ ಹೆಚ್ಚು ಖಾರವಾಗಿರುತ್ತದೆ. ಬಿಳಿ ಈರುಳ್ಳಿ ಸಿಹಿಯಾಗಿದ್ದು ಊಟಕ್ಕೆ ನೆಂಚಿಕೊಂಡು ತಿನ್ನಲು ಇಷ್ಟಪಟ್ಟು ಗ್ರಾಹಕರು ಖರೀದಿಸುತ್ತಾರೆ. ಅಲ್ಲದೆ ದಪ್ಪಗೆಡ್ಡೆಯಿರುತ್ತದೆ. ಹಾಗಾಗಿ ವರ್ತಕರು ಮುಂದೆಬಿದ್ದು ಗುಜರಾತ್ ಈರುಳ್ಳಿಯನ್ನು ಕೊಂಡರು.
ರೈತರು ಹಾಗೂ ವರ್ತಕರ ಮನವೊಲಿಸಿ ಅದೂ ಜಿಲ್ಲಾ ಕೇಂದ್ರದಲ್ಲೇ ಇಲ್ಲದ ಈರುಳ್ಳಿ ಹರಾಜು ವ್ಯವಸ್ಥೆಯನ್ನು ಹುಳಿಯಾರಿನಂತ ಹೋಬಳಿ ಕೇಂದ್ರದಲ್ಲಿ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಸ್ಥಳೀಯ ಈರುಳ್ಳಿ ಬೆಳೆಗಾರರ ಜೊತೆಗೆ ಹೊರರಾಜ್ಯದ ಬೆಳೆಗಾರರು ಹಾಗೂ ವ್ಯಾಪಾರಿಗಳು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/02/24HULIYAR3-scaled-e1614233275906.jpg)