ಕಾಂಗ್ರೆಸ್‍ಗೆ ಕೈ ಕೊಟ್ಟ ಸದಸ್ಯ : ಬಿಜೆಪಿ ತೆಕ್ಕೆಗೆ ಪಪಂ ಗಾದಿ

 ಹುಳಿಯಾರು :

      ತೀವ್ರ ಕುತೂಹಲ ಕೆರಳಿಸಿದ್ದ ಹುಳಿಯಾರು ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಸದಸ್ಯ ರಾಜುಬಡಗಿ ಗೈರುಹಾಜರಿಯಿಂದ ಬಿಜೆಪಿಗೆ ಪಪಂ ಗಾದಿ ಅನಾಯಾಸವಾಗಿ ಒಲಿದಿದೆ. ಹುಳಿಯಾರು ಪಪಂ ನೂತನ ಅಧ್ಯಕ್ಷರಾಗಿ ಎಲ್ಲರ ನಿರೀಕ್ಷೆಯಂತೆ ಕೆಎಂಎಲ್ ಕಿರಣ್‍ಕುಮಾರ್ ಹಾಗೂ ಶ್ರುತಿಸನತ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗುವುದರ ಮೂಲಕ ಹುಳಿಯಾರು ಪಪಂ ಪ್ರಥಮ ಅಧ್ಯಕ್ಷ-ಉಪಾಧ್ಯಕ್ಷರೆಂಬ ದಾಖಲೆಗೆ ಭಾಜನರಾದರು.

      ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಒಂದು ಗಂಟೆಗಳ ಕಾಲ ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಕೆಎಂಎಲ್ ಕಿರಣ್‍ಕುಮಾರ್, ಕಾಂಗ್ರೆಸ್ ಪಕ್ಷದಿಂದ ದಸ್ತಗಿರ್‍ಸಾಬ್ ಹಾಗೂ ಪಕ್ಷೇತರವಾಗಿ ಸೈಯದ್ ಜಹೀರ್‍ಸಾಬ್ ಸೇರಿದಂತೆ ಒಟ್ಟು ಮೂರು ಮಂದಿ ತಮ್ಮ ನಾಮಪತ್ರ ಸಲ್ಲಿಸಿದ್ದರಾದರೂ ಕೊನೆ ಕ್ಷಣದಲ್ಲಿ ಜಹೀರ್‍ಸಾಬ್ ತಮ್ಮ ನಾಮಪತ್ರ ಹಿಂಪಡೆದರು. ಹಾಗೆಯೇ ಉಪಾಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶೃತಿಸನತ್ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರೀತಿ ರಾಘವೇಂದ್ರ ಸೇರಿದಂತೆ ಒಟ್ಟು ಇಬ್ಬರೂ ತಮ್ಮ ನಾಮಪತ್ರ ಸಲ್ಲಿಸಿದರು.
ನಂತರ ಮಧ್ಯಾಹ್ನ 1 ಗಂಟೆಯಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿ, ಒಟ್ಟು 16 ಮಂದಿ ಸಂಖ್ಯಾ ಬಲವುಳ್ಳ ಪಪಂನಲ್ಲಿ ಹಾಲಿ ಶಾಸಕರ ಹಾಗೂ ಸಂಸದರ ಮತವು ಸೇರಿ 18 ಮತಗಳು ಚಲಾವಣೆಯಾಗಬೇಕಿತ್ತು. ಈ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಂಗಾಧರಯ್ಯ (ಬಡಗಿರಾಜು) ಅವರ ಗೈರು ಹಾಜರಾತಿಯಲ್ಲಿ ಒಟ್ಟು 15 ಮಂದಿ ಸದಸ್ಯರು ಪಾಲ್ಗೊಂಡಿದ್ದರು.

ಬಿಜೆಪಿ ಪಕ್ಷದಿಂದ ಆಯ್ಕೆಯಾದ 6 ಮಂದಿ ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯೆಯ ಬೆಂಬಲ ಹಾಗೂ ಶಾಸಕರ ಮತ್ತು ಸಂಸದರ ಮತ ಸೇರಿ ಒಟ್ಟು 9 ಮತಗಳು ಚಲಾವಣೆಗೊಂಡಿತು.

     ಹಾಗೆಯೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಕಾಂಗ್ರೆಸ್ ಪಕ್ಷದ ಐದು ಸದಸ್ಯರ ಪೈಕಿ 4 ಸದಸ್ಯರು ಹಾಗೂ ಜೆಡಿಎಸ್ ಪಕ್ಷದ 3 ಸದಸ್ಯರು ಮತ್ತು 1 ಪಕ್ಷೇತರ ಸದಸ್ಯನ ಬೆಂಬಲ ಸೇರಿ ಒಟ್ಟು ಎಂಟು ಮತಗಳು ಚಲಾವಣೆಗೊಂಡವು.
17 ಮತಗಳ ಸಂಖ್ಯಾ ಬಲಕ್ಕೆ ಬಿಜೆಪಿ ಅಭ್ಯರ್ಥಿಗಳಿಗೆ ಒಟ್ಟು ಒಂಬತ್ತು ಮತಗಳು ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ 8 ಮತಗಳು ಲಭಿಸುವ ಮೂಲಕ ಒಂದು ಮತದ ಅಂತರದಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಯಿತು. ಹೀಗಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಯುವ ಉದ್ಯಮಿ ಕೆಎಂಎಲ್ ಕಿರಣ್‍ಕುಮಾರ್ ಅಧ್ಯಕ್ಷರಾಗಿ ಚುನಾಯಿತಗೊಂಡರೆ, ಎಂಕಾಂ ಪದವಿಧರೆ ಶೃತಿ ಸನತ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

      ಹಾಜರಿದ್ದ ಸದಸ್ಯರುಗಳ ಪರ-ವಿರೋಧ ಸಹಿಗಳು ಹಾಗೂ ಕೈಯೆತ್ತುವುದರ ಮೂಲಕ ಮತ ಚಲಾವಣೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ತೇಜಸ್ವಿನಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಘೋಷಣೆ ಮಾಡಿದರು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಸಂಸದ ಜಿ.ಎಸ್.ಬಸವರಾಜು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ವಿಪ್ ಜಾರಿಯಾದರೂ ಕೈ ಕೊಟ್ಟ ಸದಸ್ಯ :

     ಪಪಂ ಚುನಾವಣೆ ನಡೆದು ಫಲಿತಾಂಶದಲ್ಲಿ ಯಾರಿಗೂ ಬಹುಮತ ಬಾರದೇ ಅಂದಿನಿಂದಲೂ ಅಧ್ಯಕ್ಷ ಸ್ಥಾನದ ಗದ್ದುಗೆ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ನಾನಾ ರೀತಿಯ ಲೆಕ್ಕಾಚಾರ ನಡೆಯುತ್ತಲೆ ಇತ್ತು. ಅಭ್ಯರ್ಥಿಗಳ ಸೇರ್ಪಡೆ ಹಾಗೂ ಇತರೆ ಪಕ್ಷದ ಮೈತ್ರಿಯ ಲೆಕ್ಕಚಾರದೊಂದಿಗೆ ಅಧಿಕಾರ ಗಾದಿ ಏರಲೇಬೇಕೆಂಬ ಜಿದ್ದಾಜಿದ್ದಿ ನಡೆದಿತ್ತು. ಅಂದಿನಿಂದ ರಾಜಕೀಯ ಬೆಳವಣಿಗೆಯಲ್ಲಿ ಒಮ್ಮೆ ಬಿಜೆಪಿ ಪಕ್ಷಕ್ಕೆ ಹಾಗೂ ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬ ಸ್ಥಿತಿ ಇತ್ತು.

      ರಾಜಕೀಯ ತಂತ್ರಗಾರಿಕೆ ಫಲವಾಗಿ ಚುನಾವಣೆಯನ್ನು ಸಹ ಮುಂದೂಡಲಾಗಿತ್ತು. ಬುಧವಾರ ಪಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸದಸ್ಯ ರಾಜು ಬಡಗಿ ನಾಟ್ ರೀಚಬಲ್ ಆಗಿ ಯಾರ ಕೈಗೂ ಸಿಗದೆ, ಏನಾಗಿದೆ ಎಂಬ ಮಾಹಿತಿಯೂ ತಿಳಿಯದೆ, ಕಾಂಗ್ರೆಸ್ ಪಕ್ಷದಿಂದ ವಿಪ್ ಜಾರಿ ಮಾಡಿದ್ದರೂ ಸಹ ಹಾಜರಾಗದೆ ಚುನಾವಣೆಯ ಚಿತ್ರಣವೆ ಬದಲಾಗಿ, ಬಿಜೆಪಿ ಗೆಲುವಿಗೆ ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link