ಹುಳಿಯಾರು :
ದೇವಾಲಯದ ಬಾಗಿಲ ಬೀಗವನ್ನು ಕತ್ತರಿಸಿ, ಒಳನುಗ್ಗಿ ಹುಂಡಿ ಹೊತ್ತೊಯ್ದು ದೇವಾಲಯದ ಪಕ್ಕದ ಜಮೀನಿನಲ್ಲಿ ಹುಂಡಿ ಒಡೆದು ಹಣ ದೋಚಿಕೊಂಡು ಹೋಗಿರುವ ಪ್ರಕರಣ ಹುಳಿಯಾರು ಸಮೀಪದ ಹನುಮಂತಪುರದಲ್ಲಿ ಶನಿವಾರ ರಾತ್ರಿ ಜರುಗಿದೆ.
ಹುಳಿಯಾರು ಹೋಬಳಿ, ಮೋಟಿಹಳ್ಳಿ ಮಜರೆ ಹನುಮಂತಪುರದ ಆಂಜನೇಯ ದೇವಾಲಯದಲ್ಲಿ ಹುಂಡಿ ಹಣ ಕಳುವಾಗಿದೆ. ಶನಿವಾರ ರಾತ್ರಿ ಗ್ಯಾಸ್ ಕಟರ್ ಬಳಸಿ ದೇವಾಲಯದ ಬೀಗ ಕತ್ತರಿಸಿ ಕಳ್ಳರು ಒಳ ನುಗ್ಗಿ ದೇವಾಲಯದಲ್ಲಿ 6 ತಿಂಗಳಿನಿಂದ ಭಕ್ತರಿಂದ ಸಂಗ್ರಹವಾದ ಹಣದ ಹುಂಡಿಯನ್ನು ದೇವಾಲಯದಿಂದ ಹೊತ್ತೊಯ್ದಿದ್ದಾರೆ.
ದೇವಾಲಯದ ಸ್ವಲ್ಪ ದೂರದ ಜಮೀನೊಂದರಲ್ಲಿ ಹುಂಡಿಯನ್ನೂ ಸಹ ಗ್ಯಾಸ್ ಕಟರ್ನಲ್ಲಿ ಕತ್ತರಿಸಿ ಅದರಲ್ಲಿದ್ದ ಹಣವನ್ನು ದೋಚಿ ಹುಂಡಿಯನ್ನು ಜಮೀನಿನಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಹುಳಿಯಾರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
