ಗುಬ್ಬಿ
ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ನಾನು ಸೇರಿದಂತೆ ಅನೇಕ ಸಂಸದರು ಧ್ವನಿ ಎತ್ತುತ್ತೇವೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸೋಮವಾರ ನಡೆದ ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಹಕ್ಕೊತ್ತಾಯ ಕಾರ್ಯಕ್ರಮ ಹಾಗೂ ಜಾಥ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ನಲ್ಲಿ ನಡೆದ ಅಧಿವೇಶನದಲ್ಲಿ ಈಗಾಗಲೇ ನಿಮ್ಮ ಸಮುದಾಯದ ಬಗ್ಗೆ ಮೀಸಲಾತಿಗೆ ಸಂಬಂಧಿಸಿದಂತೆ ಮಾತನಾಡಿದ್ದು, ಮತ್ತೆ ಮುಂಬರುವ ಅಧಿವೇಶನದಲ್ಲಿ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡುತ್ತೇನೆ. ಆದರೂ ನಿಮ್ಮ ಸಮುದಾಯಕ್ಕೆ ಹೆಚ್ಚಿನ ಶಿಕ್ಷಣ
ಸಿಗುವಂತಾಗಬೇಕಾಗಿದೆ ಮತ್ತು ಮೂಢ ನಂಬಿಕೆಯಿಂದ ಹೊರಬಂದು ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಬೇಕು ಮತ್ತು ತಾವೆಲ್ಲರೂ ಸಹ ಒಟ್ಟಾಗಿದ್ದು ಹೋರಾಟ ನಡೆಸಿದ್ದಲ್ಲಿ ಪ್ರತಿ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ನಾನು ಶಾಸಕನಾದ ಮೇಲೆ ಬಹುತೇಕ ಕಾಡುಗೊಲ್ಲರ ಹಟ್ಟಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ನಾನು ಶಾಸಕನಾಗಿದ್ದು ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಹಾಗೂ ನಿಮ್ಮ ಹಾಕ್ಕೋತ್ತಾಯಕ್ಕೆ ನಾನು ಜೊತೆಯಾಗಿರುತ್ತೇನೆ. ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮೀಸಲಾತಿ ಪಟ್ಟಿ ರವಾನೆಯಾಗಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮ ಮುಗಿದ ನಂತರ ಕಾಡುಗೊಲ್ಲ ಸಮುದಾಯದ ಮುಖಂಡರುಗಳು ಹಾಗೂ ಗ್ರಾಮಸ್ಥರುಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಜಿಲ್ಲಾಧ್ಯಕ್ಷ ಗಂಗಾಧರ್, ತಾಲ್ಲೂಕು ಅಧ್ಯಕ್ಷ ದೇವರಾಜ್, ಪೂಜಾರಿಗಳಾದ ಪಾಪಣ್ಣ, ಯರಪ್ಪ, ಮುಖಂಡರಾದ ಬಸವರಾಜು, ತಿಮ್ಮಣ್ಣ, ಯಶೋಧಮ್ಮ, ನಾಗರಾಜು, ಕೆ.ಟಿ.ಪ್ರಭು, ಗುಡ್ಡದಹಳ್ಳಿ ಬಸವರಾಜು, ಜುಂಜೆಗೌಡ, ಸಿದ್ದರಾಜು, ಕೃಷ್ಣಮೂರ್ತಿ, ಕಾಡುಗೊಲ್ಲ ಸಮುದಾಯದ ಗೌಡರು, ಪೂಜಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
