ಕೊರಟಗೆರೆ
ಹಿಂದಿನ ಈಸ್ಟ್ ಇಂಡಿಯಾ ಕಂಪನಿಗಳ ಆಡಳಿತದಂತೆ ಆಡಳಿತ ನಡೆಸುತ್ತಿರುವ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಆಸ್ತಿಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿ, ದೇಶದ ರೈತರನ್ನು ಗುಲಾಮಗಿರಿಗೆ ತಳ್ಳುತ್ತಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ದ ಸೆ.27 ರಂದು ಸೋಮವಾರ ಭಾರತ್ ಬಂದ್ಗೆ ಕರೆ ನೀಡಲಾಗಿದೆ. ಅದರಂತೆ ತುಮಕೂರು ಜಿಲ್ಲೆ ಬಂದ್ ಆಚರಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ಪಟೇಲ್ ತಿಳಿಸಿದರು.
ಅವರು ಪಟ್ಟಣದ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ರೈತಪರ ಆಡಳಿತ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತಕ್ಕೆ ಬಂದ ನಂತರ ರೈತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿವೆ. ದೇಶದ ಅಸ್ತಿಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿವೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯನ್ನು ಬೆಳೆದು ಅದನ್ನು ಗಾಜಿನ ಅರಮನೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ಮಾಡಿ, ಅಧರ್À ಎಕರೆ ಅಥವಾ ಒಂದು ಎಕರೆ ಜಮೀನಿನಲ್ಲಿ ನಮ್ಮ ರೈತ ಕಷ್ಟ್ಟಪಟ್ಟು ಬೆಳೆ ಬೆಳೆದು ಕಾರ್ಪೊರೇಟ್ ಕಂಪನಿಗಳ ಪೈಪೋಟಿಗಳಲ್ಲಿ ಬದುಕಲು ಸಾಧ್ಯವೆ? ಇಷ್ಟೆಲ್ಲಾ ಸಮಸ್ಯೆಗಳಲ್ಲಿ ದೇಶದ ರೈತ ಬದುಕಲು ಸಾಧ್ಯವೆ? ಎಪಿಎಂಸಿಗಳನ್ನು ಮುಚ್ಚುತ್ತಿದ್ದು ಜೊತೆಗೆ ವಿದ್ಯುತ್ ಖಾಸಗೀಕರಣ, ಭೂ ಸುಧಾರಣೆ ಕಾಯಿದೆ, ಬೀಜ ಕಾಯಿದೆ ಸೇರಿದಂತೆ ಅನೇಕ ರೈತ ವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾವು ಸೆ.27 ರಂದು ಭಾರತ್ ಬಂದ್ಗೆ ಕರೆ ನೀಡಿದ್ದು, ಇದಕ್ಕೆ ಎಲ್ಲಾ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿವೆ ಎಂದರು.
ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ನಿರಂತರ ಪ್ರತಿಭಟನೆಯಲ್ಲಿ ತೊಡಗಿರುವ ರೈತ ಮುಖಂಡರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವ ಪ್ರಯತ್ನ ಕೂಡ ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಹಲವು ರೀತಿಯಲ್ಲಿ ದೌರ್ಜನ್ಯಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ರೈತ ಸಂಘಟನೆಗಳ ಆದೇಶದ ಮೇರೆಗೆ ಸೆ.27 ರಂದು ಇಡೀ ದೇಶದಲ್ಲಿ ಭಾರತ್ ಬಂದ್ ಆಚರಿಸಲು ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ರೈತ ಸಂಘ, ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕರ ಸಂಘಗಳೊಂದಿಗೆ ಬಂದ್ ಆಚರಿಸುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಂದ್ ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಧನಂಜಯ್ ಆರಾಧ್ಯ, ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಪ್ರಸನ್ನಕುಮಾರ್, ಲೋಕೇಶ್, ರವಿಕುಮಾರ್, ಲಕ್ಷ್ಮನಾಯ್ಕ, ಕಾಂತೇಗೌಡ, ದಾಸಗಿರಿಯಪ್ಪ, ರಂಗಣ್ಣ, ಮಲ್ಲೇಶಯ್ಯ, ವೀರಣ್ಣ, ರುದ್ರೇಶ್ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/09/24-9-2021-koratagere-photo-01-scaled.jpg)