ಬಾಂಗ್ಲಾ ಅಭಿವೃದ್ಧಿಗೆ ಅಗತ್ಯ ಬೆಂಬಲ: ಎಸ್. ಜೈಶಂಕರ್

ಢಾಕಾ

     ಬಾಂಗ್ಲಾದೇಶದ ಅಭಿವೃದ್ಧಿಗೆ ಭಾರತವು ಎಲ್ಲ ರೀತಿಯ ಬೆಂಬಲವನ್ನು ನೀಡಲಿದ್ದು ಈ ಸಹಭಾಗಿತ್ವವು ದಕ್ಷಿಣ ಏಷ್ಯಾದಲ್ಲಿ ಆದರ್ಶಪ್ರಾಯವಾಗಿ ಉಳಿಯುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪಿಸಿದ್ದಾರೆ ಎಂದು ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಮಂಗಳವಾರ ತಿಳಿಸಿದ್ದಾರೆ

    ನಾವು ಪಾಲುದಾರರಾಗಿ ಕೆಲಸ ಮಾಡಲು ನಿರ್ಧರಿಸಿದ್ದು, “ಬಾಂಗ್ಲಾದೇಶದೊಂದಿಗಿನ ನಮ್ಮ ಸಹಭಾಗಿತ್ವವು ನೆರೆಹೊರೆಯವರು ಒಟ್ಟಾಗಿ ಏನು ಮಾಡಬಹುದೆಂಬುದಕ್ಕೆ ಒಂದು ಉದಾಹರಣೆಯಾಗಲಿದೆ” ಎಂದು ಜೈಶಂಕರ್ ತಮ್ಮ ಬಾಂಗ್ಲಾದೇಶದ ಸಹವರ್ತಿ ಎ.ಕೆ.ಅಬ್ದುಲ್ ಮೊಮೆನ್ ಅವರೊಂದಿಗಿನ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

    “ಭದ್ರತೆಯ ವಿಷಯಕ್ಕೆ ಬಂದಾಗ, ಅಪರಾಧಗಳು, ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಸುಧಾರಿತ ಸಹಭಾಗಿತ್ವವು ಎರಡೂ ದೇಶಗಳ ಜನರಿಗೆ ನೇರ ಲಾಭವನ್ನುಂಟು ಮಾಡುತ್ತದೆ ಎಂದು ನಾವು ನಂಬುತ್ತೇವೆ.” ಕಾರ್ಯತಂತ್ರದ ಸಹಭಾಗಿತ್ವಕ್ಕಿಂತ ಸಂಬಂಧಗಳಿಗೆ ಹೆಚ್ಚು ಬೆಲೆ ಎಂದು ಜೈಶಂಕರ್ ಹೇಳಿದರು.

     “ಬಾಂಗ್ಲಾದೇಶದ ಪ್ರಮುಖ ಅಭಿವೃದ್ಧಿ ಪಾಲುದಾರರಾಗಿರುವುದನ್ನು ನಾವು ಗೌರವಿಸುತ್ತೇವೆ. ದೇಶದ ಅಭಿವೃದ್ಧಿ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ನಾವು ಸಾಧ್ಯವಿರುವ ಎಲ್ಲ ರೀತಿಯ ಬೆಂಬಲವನ್ನು ನೀಡಲಿದ್ದೇವೆ’’ ಎಂದು ಜೈಶಂಕರ್ ಹೇಳಿದರು.ನೀರು ಹಂಚಿಕೆ ವಿಷಯದ ಬಗ್ಗೆ, 54 ನದಿಗಳಿಂದ ಪರಸ್ಪರ ಸ್ವೀಕಾರಾರ್ಹ ಸೂತ್ರವನ್ನು ಕಂಡುಹಿಡಿಯಲು ಎರಡೂ ದೇಶಗಳು ಎದುರು ನೋಡುತ್ತಿವೆ ಎಂದು ಅವರು ಹೇಳಿದರು.

      ಉಭಯ ದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಇಂಧನ ಸಹಕಾರಕ್ಕೆ ಸಂಬಂಧಿಸಿದಂತೆ, ಎರಡೂ ದೇಶಗಳು ಪರಸ್ಪರ ಯಶಸ್ಸಿನಲ್ಲಿ ಪಾಲು ಹೊಂದಿವೆ ಎಂದು ಜೈ ಶಂಕರ್ ತಿಳಿಸಿರುವುದಾಗಿ ಬಾಂಗ್ಲಾದೇಶದ ಸಾಂಗ್‌ಬಾದ್ ಸುದ್ದಿಸಂಸ್ಥೆ ವರದಿ ಮಾಡಿದೆ.

    ಉಭಯದೇಶಗಳ ಜನರ ನಡುವಿನ ಸಂಪರ್ಕಕ್ಕಾಗಿ, ಭಾರತವು ಢಾಕಾದಲ್ಲಿ ಅತಿದೊಡ್ಡ ರಾಯಭಾರ ಸೇವೆ ನಿರ್ವಹಿಸುತ್ತಿದ್ದು, “ನಾವು ಅದನ್ನು ತಡೆರಹಿತವಾಗಿ ನಿರ್ವಹಿಸಲು ಬಯಸುತ್ತೇವೆ” ಎಂದರು.”ಬಂಗಬಂಧುವಿನ ಶತಮಾನೋತ್ಸವ ಮತ್ತು ಬಾಂಗ್ಲಾದೇಶ ಸ್ವಾತಂತ್ರ್ಯದ 50ನೇ ವಾರ್ಷಿಕೋತ್ಸವ ಆಚರಿಸಲು ನಾವು ಎದುರು ನೋಡುತ್ತಿದ್ದೇವೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧವು ತುಂಬಾ ಪ್ರಬಲವಾಗಿದ್ದು, ಈ ಸಂದರ್ಭದಲ್ಲಿ ಇದು ಮತ್ತಷ್ಟು ಬಲಗೊಳ್ಳಲಿದೆ ಎಂದು ಜೈಶಂಕರ್ ಭರವಸೆ ನೀಡಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link