ಬೆಂಗಳೂರು
ಥಣಿಸಂದ್ರದ ಜಾಮೀಯಾ ಮಹಮದೀಯ ಮನ್ಸೂರ್ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆಯನ್ನು ರದ್ದು ಪಡಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಕನ್ನಡ ರಕ್ಷಣಾ ವೇದಿಕೆಯ ಚಾಮರಾಜಪೇಟೆ ವಿಭಾಗದ ಅಧ್ಯಕ್ಷ ಚಾಂದ್ ಪಾಷಾ ಅವರು ಸಲ್ಲಿಸಿದ್ದ ದೂರನ್ನು ಪರಿಶೀಲಿಸಿದ ಉಪ ನಿರ್ದೇಶಕರು ದಾಖಲೆಗಳನ್ನು ಸಲ್ಲಿಸುವಂತೆ ಸಾಮರ್ ಶಾಲೆಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದರು. ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಶಾಲೆಯ ಕಡೆಯಿಂದ ಯಾವುದೇ ಪೂರಕ ದಾಖಲೆಗಳನ್ನು ಉಪ ನಿರ್ದೇಶಕರಿಗೆ ಸಲ್ಲಿಸಿರಲಿಲ್ಲ. ಮೂರನೇ ನೋಟಿಸ್ನ ನಂತರ ಶಾಲೆಯಿಂದ ಕೆಲ ದಾಖಲೆಗಳನ್ನು ನೀಡಲಾಗಿತ್ತು. ಇಡೀ ದಾಖಲೆಗಳನ್ನು ಪರಿಶೀಲಿಸಿದಾಗ, ದೂರುದಾರರು ಮಾಡಿರುವ ಆರೋಪ ಸರಿಯಾಗಿದೆ ಎಂಬುದು ಉಪ ನಿರ್ದೇಶಕರಿಗೆ ಮನವರಿಕೆಯಾಗಿತ್ತು.
ಸದರಿ ಶಾಲೆಯು ನಡೆಯುತ್ತಿರುವ ಜಾಗವು ಸಂಸ್ಥೆಗೆ ಸೇರಿದ್ದಾಗಿರುವುದಿಲ್ಲ. ಅಲ್ ಜಾಮಿಯಾ ಮಹಮದೀಯ ಎಜುಕೇಷನ್ ಸಂಸ್ಥೆಯ ಹೆಸರಿಗೆ ನಕಲಿ ಪತ್ರವೊಂದನ್ನು ಸೃಷ್ಟಿಸಿಕೊಂಡು ಈಗ ಶಾಲೆ ನಡೆಯುತ್ತಿರುವ ಸಂಸ್ಥೆಯು ಅಲ್ಲಿ ಶಾಲೆ ಆರಂಭಿಸಿತು.ಆದರೆ ಅಲ್ ಜಾಮಿಯಾ ಮಹಮದೀಯ ಎಜುಕೇಷನ್ ಸಂಸ್ಥೆ ಎಂಬುದು ಇಡೀ ದೇಶದಲ್ಲಿ ಎಲ್ಲಿಯೂ ನೋಂದಣಿಯಾಗಿರುವುದಿಲ್ಲ. ಹಾಗಾಗಿ ಜಾಗವೂ ಕೂಡ ಅಕ್ರಮವಾಗಿಯೆ ಪಡೆಯಲಾಗಿದೆ.
ಶಾಲೆಯು ಈವರೆಗೆ ಜಾಮಿಯಾ ಮಹಮದೀಯ ಮನ್ಸೂರ ಹೆಸರನಲ್ಲಿ ಶಾಲೆ ನಡೆಯುತ್ತಿದೆ. ಆದರೆ, ಇಲಾಖೆ ವಿಚಾರಣೆ ಸಂದರ್ಧದಲ್ಲಿ ಶಾಲೆಯ ಮುಖ್ಯಸ್ಥರೇ ಇದನ್ನು ನಿರಾಕರಿಸಿದ್ದು, ಇದು ನಮ್ಮ ಸಂಸ್ಥೆಯಲ್ಲ, ನಮ್ಮದು ದಿ ಅಲ್ ಜಾಮಿಯಾ ಮಹಮದೀಯ ಎಜುಕೇಷನ್ ಸೊಸೈಟಿ ಮುಂಬೈ ಎಂಬುದಾಗಿದೆ ಎಂದು ಇಲಾಖೆಗೆ ಲಿಖಿತವಾಗಿ ತಿಳಿಸಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆಗಳನ್ನೂ ಶಿಕ್ಷಣ ಸಂಸ್ಥೆ ಇಲಾಖೆಗೆ ಒದಗಿಸಿರುವುದಿಲ್ಲ.
ಮುಂಬೈನಲ್ಲಿ ನೋಂದಣಿಯಾಗಿರುವ ಸಂಸ್ಥೆಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಆದರೆ ಮುಂಬೈ ಮೂಲದ ಜಾಮಿಯ ಮಹಮದೀಯ ಮನ್ಸೂರ (ರಿ), ಅಲ್ ಜಾಮಿಯಾ ಮಹಮದೀಯ ಎಜುಕೇಷನ್ ಸೊಸೈಟಿ ಮತ್ತು ಜಾಮಿಯಾ ಮಹಮದೀಯ ಎಜುಕೇಷನ್ ಸೊಸೈಟಿ ಎಂಬ ಸಂಸ್ಥೆಗಳು ತಮಗೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗೂ ಸಂಬಂಧವಿಲ್ಲ. ನಾವು ಯಾರಿಗೂ ಶಾಲೆ ನಡೆಸಲು ಅನುಮತಿ ನೀಡಿಲ್ಲ ಎಂದು ಮುಂಬೈನ ಪಬ್ಲಿಕ್ ಟ್ರಸ್ಟ್ ರಿಜಿಸ್ಟ್ರೇಷನ್ ಕಚೇರಿಯ ಚಾರಿಟಿ ಕಮಿಷನರ್ಗೆ ಲಿಖಿತವಾಗಿ ಸ್ಪಷ್ಟನೆ ನೀಡಿದ್ದಾರೆ. ಅಂದರೆ, ಈ ಶಿಕ್ಷಣ ಸಂಸ್ಥೆಯು ಎಲ್ಲಿಯೂ ನೋಂದಣಿಯಾಗದೇ ಇರುವ ಸಂಸ್ಥೆಯ ಹೆಸರಿನಲ್ಲಿ ಶಾಲೆಯನ್ನು ನಡೆಸುತ್ತಿದೆ ಎಂಬುದು ಇಲಾಖೆಗೆ ಸ್ಪಷ್ಟವಾಗಿದೆ.
ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಜಾಗವನ್ನು ಅಕ್ರಮವಾಗಿ ಹಿಡಿದಿದ್ದಾರೆ. ಅಲ್ಲದೆ, ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿ ಅನುಮತಿಯನ್ನು ಪಡೆಯಲಾಗಿದೆ. ಉಪನಿರ್ದೇಶಕರ ಕಚೇರಿಯ ತ್ರಿ ಸದಸ್ಯರ ಸಮಿತಿಯು ಎಲ್ಲವನ್ನೂ ಪರಿಶೀಲಿಸಿ ಸಂಸ್ಥೆಯು ನಡೆಸುತ್ತಿರುವ ೧ರಿಂದ ೧೦ನೇ ತರಗತಿವರೆಗಿನ ಶಾಲೆಯ ಅನುಮತಿಯನ್ನು ರದ್ದು ಪಡಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಫಾರಸು ಮಾಡಿದೆ.
ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದ್ದ ಆಯುಕ್ತರ ಅವಗಾಹನೆಗೂ ದಾಖಲೆಗಳನ್ನು ನೀಡಲಾಗಿದೆ. ಆದ್ದರಿಂದ ಸಂಸ್ಥೆಯ ಅನುಮತಿಯನ್ನು ಹಿಂದಕ್ಕೆ ಪಡೆಯುವಂತೆ ಉಪನಿರ್ದೇಶಕರು ತಮ್ಮ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.ಅಲ್ಲದೆ ಜಾಮಿಯ ಮಹಮದೀಯ ಮನ್ಸೂರ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುತ್ತಿದ್ದು, ಸರ್ಕಾರದಿಂದ ಅನುಮತಿ ಪಡೆಯದೇ ಇರುವುದರಿಂದ ಈ ಪ್ರಮಾಣ ಪತ್ರಗಳಿಗೆ ಮಾನ್ಯತೆ ಇರುವುದಿಲ್ಲ. ಅಲ್ಲದೆ ಈ ಸಂಸ್ಥೆಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಕಾನೂನು ಬಾಹಿರವಾಗಿ ಹತ್ತು ಲಕ್ಷ ರೂ. ಅನುದಾನವನ್ನು ಪಡೆದಿತ್ತು ಈ ಮೂಲಕ ಸರ್ಕಾರವನ್ನು ವಂಚಿಸಲಾಗಿದೆ.
ಇಷ್ಟೆಲ್ಲಾ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಶಿಕ್ಷಣ ಸಂಸ್ಥೆಗೆ ಪೋಷಕರು ತಮ್ಮ ಮಕ್ಕಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದಾಖಲು ಮಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತೇವೆ. ಈವರೆಗೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಇಲಾಖೆಯು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇವೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಅಧ್ಯಕ್ಷರು ಶ್ರೀನಿವಾಸ್ ತಿಳಿಸಿದ್ರು
