ನವದೆಹಲಿ:
ಮುಸ್ಲಿಂ ಸಂಘಟನೆಗಳ ತೀವ್ರ ವಿರೋಧದ ನಡುವೆ, ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿಯ (ಜೆಪಿಸಿ) ಮುಖ್ಯಸ್ಥ ಜಗದಾಂಬಿಕಾ ಪಾಲ್ ಹೇಳಿಕೆ ನೀಡಿದ್ದು, ಸರ್ಕಾರವು ಯಾವುದೇ ವಕ್ಫ್ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಮತ್ತು ಅದು ವಕ್ಫ್ ಮಂಡಳಿಯ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ಎನ್ಡಿಎ ಪ್ರಮುಖ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಮುಸ್ಲಿಮೇತರ ಸದಸ್ಯರ ಸೇರ್ಪಡೆ ಮತ್ತು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವಂತಹ ನಿಬಂಧನೆಗಳ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ವಕ್ಫ್ ಆಸ್ತಿಗಳ ಸ್ವಾಯತ್ತತೆಯನ್ನು ಸರ್ಕಾರ ವಶಪಡಿಸಿಕೊಳ್ಳುವ ಬಗ್ಗೆ ಪ್ರತಿಪಕ್ಷಗಳ ಕಳವಳಕ್ಕೆ ಪ್ರತಿಕ್ರಿಯಿಸಿದ ಪಾಲ್, ವಕ್ಫ್ ಆಸ್ತಿಗಳು ವಕ್ಫ್ ನಿಯಂತ್ರಣದಲ್ಲಿ ಉಳಿಯುತ್ತದೆ, ಇದರಲ್ಲಿ ಯಾವುದೇ ಅನುಮಾನ ಬೇಡ. ಸರ್ಕಾರವು ಯಾವುದೇ ವಕ್ಫ್ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ವಾರ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೊಸ ಮಸೂದೆಯನ್ನು ಬಲವಾಗಿ ವಿರೋಧಿಸಿತ್ತು ಮತ್ತು ಮಸೂದೆಯನ್ನು ಹಿಂಪಡೆಯದಿದ್ದರೆ ಕಾನೂನಿನ ವ್ಯಾಪ್ತಿಯಲ್ಲಿ ರಾಷ್ಟ್ರವ್ಯಾಪಿ ಚಳವಳಿಯನ್ನು ಪ್ರಾರಂಭಿಸುತ್ತೇವೆ ಎಂದು ಪ್ರತಿಪಾದಿಸಿತ್ತು. ಟಿಡಿಪಿಯ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ತಮ್ಮ ಪಕ್ಷಗಳು ವಕ್ಫ್ ಮಸೂದೆಯನ್ನು ವಿರೋಧಿಸುತ್ತವೆ ಎಂದು ಮುಸ್ಲಿಂ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ ಎಂದು ಎಐಎಂಪಿಎಲ್ಬಿ ನಾಯಕರು ಹೇಳಿದ್ದಾರೆ.
ಸರ್ಕಾರವು ವಕ್ಫ್ ಆಸ್ತಿಯ ಉತ್ತಮ ಆಡಳಿತಕ್ಕಾಗಿ ಮಸೂದೆಯನ್ನು ತಂದಿದೆ. ತಿದ್ದುಪಡಿಗಳು ಮತ್ತು ಜೆಪಿಸಿ ರಚಿಸಲಾಗಿದೆ. ಎಲ್ಲರಿಂದಲೂ ಮಸೂದೆಗೆ ಸಂಬಂಧಿಸಿದ ಸಮಸ್ಯೆ ಆಲಿಸುತ್ತಿದ್ದೇವೆ. ಮುಂದಿನ ಅಧಿವೇಶನದ ಮೊದಲ ವಾರದಲ್ಲಿ ವರದಿ ಸಿದ್ಧಪಡಿಸಿ ಸಲ್ಲಿಸುತ್ತೇವೆ ಎಂದು ಪಾಲ್ ಹೇಳಿದರು.
ಪಾಲ್ ಅವರು ಮಾಜಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ರಾಜ್ಯಸಭೆಯ ಮಾಜಿ ಉಪ ಅಧ್ಯಕ್ಷ ಕೆ ರೆಹಮಾನ್ ಅವರನ್ನು ಭೇಟಿ ಮಾಡಿ ವಕ್ಫ್ ತಿದ್ದುಪಡಿ ಮಸೂದೆ 2024ಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿದರು.
