ಚುರು:
ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಐದು ತಿಂಗಳಲ್ಲಿ ಐಎಎಫ್ ಯುದ್ಧ ವಿಮಾನ ಅಪಘಾತಕ್ಕೀಡಾಗುತ್ತಿರುವ ಮೂರನೇ ಪ್ರಕರಣ ಇದಾಗಿದೆ.ಬಯಲು ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
IAF ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಪ್ರಾಥಮಿಕ ವರದಿಗಳ ಪ್ರಕಾರ, ಅಪಘಾತದ ಸ್ಥಳದಿಂದ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಅವುಗಳಲ್ಲಿ ಒಂದು ಪೈಲಟ್ನದ್ದಾಗಿರಬಹುದು ಎಂದು ನಂಬಲಾಗಿದೆ. ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ(IAF) ಜಾಗ್ವಾರ್ ಯುದ್ಧ ವಿಮಾನ ಪತನವಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಯುದ್ಧ ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ವಿಮಾನ ಅಪಘಾತದ ಸ್ಥಳದ ಬಳಿ ಮಾನವ ಅವಶೇಷಗಳು ಪತ್ತೆಯಾಗಿವೆ. ಪೈಲಟ್ನ ದೇಹವು ತೀವ್ರ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಮೃತ ಎರಡನೇ ವ್ಯಕ್ತಿಯ ಗುರುತನ್ನು ವಾಯುಪಡೆ ಮತ್ತು ಸ್ಥಳೀಯ ಆಡಳಿತ ಇನ್ನೂ ದೃಢಪಡಿಸಿಲ್ಲ ಎಂದು ರಾಜಲ್ದೇಸರ್ನ ಸ್ಥಳೀಯ ಪೊಲೀಸ್ ಅಧಿಕಾರಿ ಕಮ್ಲೇಶ್ ಅವರು ಪಿಟಿಐಗೆ ತಿಳಿಸಿದ್ದಾರೆ.ವಿಡಿಯೋದಲ್ಲಿ ಅಪಘಾತದ ಸ್ಥಳದಿಂದ ಹೊಗೆ ಬರುತ್ತಿರುವುದನ್ನು ಮತ್ತು ಸ್ಥಳೀಯ ಅಧಿಕಾರಿಗಳು ಪ್ರದೇಶಕ್ಕೆ ಧಾವಿಸುತ್ತಿರುವುದನ್ನು ಕಾಣಬಹುದು. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.








