ತುಮಕೂರು
ಶ್ರವಣಬೆಳಗೊಳದ ಶ್ರೀ ದಿಗಂಬರ ಜೈನ ಮಠಕ್ಕೆ ಪೀಠಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ತುಮಕೂರು ನಗರಕ್ಕೆ ಆಗಮಿಸುತ್ತಿರುವ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಭವ್ಯ ಸ್ವಾಗತದೊಂದಿಗೆ ಡಿಸೆಂಬರ್ 21ರಂದು ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿದೆ.
ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಸಾಗಲಿದೆ. ಶೋಭಾಯಾತ್ರೆಯನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಉದ್ಘಾಟಿಸುವರು. ಡಿ.21ರಂದು ಬೆಳಗ್ಗೆ 8.30ಕ್ಕೆ ಮಹಾವೀರ ಭವನದ ಬಳಿಯಿಂದ ಹೊರಡುವ ಶೋಭಾಯಾತ್ರೆಯು ಎಂ.ಜಿ. ರಸ್ತೆ, ಗುಂಚಿ ಚೌಕ, ಚರ್ಚ್ ಸರ್ಕಲ್, ಮಂಡಿಪೇಟೆ ಸರ್ಕಲ್ ಮಾಗವಾಗಿ ಪಾಶ್ವನಾಥ ದಿಗಂಬರ ಜಿನಮಂದಿರ ತಲುಪಲಿದೆ.
ಜಿನಮಂದಿರದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜಾದಿಗಳನ್ನು ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ನಂತರ ಬೆಳಗ್ಗೆ 11 ಗಂಟೆಗೆ ಬಿ.ಎಚ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರದ ಸಿಂಹನಗದ್ದೆ ಶ್ರೀ ಕ್ಷೇತ್ರ ಬಸ್ತಿ ಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳ ದಿಗಂಬರ ಜೈನ ಮಠದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಸಚಿವ ವಿ.ಸೋಮಣ್ಣ, ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಎಸ್. ಶಿವಣ್ಣ, ಸಂಚಾರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗುರುನಾಥ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾಶ್ವನಾಥ ಸ್ವಾಮಿ ಜಿನಮಂದಿರದ ಅಧ್ಯಕ್ಷ ಟಿ.ಡಿ. ಬಾಹುಬಲಿ ವಹಿಸಲಿದ್ದಾರೆ.
ಇದೇ ವೇಳೆ ಇಬ್ಬರು ಭಟ್ಟಾರಕ ಸ್ವಾಮೀಜಿಗಳಿಗೆ ಅಷ್ಟಾವಿದಾಚನೆ ಮತ್ತು ಪಾದಪೂಜೆ ತುಮಕೂರು ಜೈನ ಸಮುದಾಯದಿಂದ ಪಾದಪೂಜೆ ಮಾಡಲಾಗುವುದು. ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ತುಮಕೂರು ನಗರದಲ್ಲಿ ಇರುವ 90 ವರ್ಷ ಮೇಲ್ಪಟ್ಟ ಹಿರಿಯ ಶ್ರಾವಕ, ಶ್ರಾವಕಿಯರನ್ನು ಸನ್ಮಾನಿಸಲಾಗುವುದು.
