ಶ್ರೀನಗರ:
ಕಳೆದ ನಾಲ್ಕು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರನ್ನು ಮಟ್ಟ ಹಾಕುವ ಕಾರ್ಯ ನಡೆಯುತ್ತಲಿದೆ. ಗುರವಾರ ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅವರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ನಾಲ್ವರು ಪೊಲೀಸರು ಇದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ, ಗುರವಾರ ಮುಂಜಾನೆ ಕಥುವಾದ ಜುಥಾನಾ ಪ್ರದೇಶದಲ್ಲಿ ಪೊಲೀಸ್ ಮತ್ತು ಸೇನೆಯ ಜಂಟಿ ತಂಡವು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಮೂಲಗಳು ತಿಳಿಸಿವೆ.
ಹಿರಾನಗರ ವಲಯದಲ್ಲಿ ಮೊನ್ನೆ ಭಾನುವಾರ ನಡೆದ ಎನ್ಕೌಂಟರ್ ಸ್ಥಳದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ರಾಜ್ಬಾಗ್ನ ಘಾಟಿ ಜುಥಾನಾ ಪ್ರದೇಶದ ಜಖೋಲೆ ಗ್ರಾಮದ ಬಳಿ ಭದ್ರತಾ ಪಡೆಗಳು ಇಂದು ಬೆಳಗ್ಗೆ ಭಯೋತ್ಪಾದಕರು ಕಾಣಿಸಿಕೊಂಡಾಗ ಗುಂಡಿನ ಚಕಮಕಿ ಪ್ರಾರಂಭವಾಯಿತು. ಎರಡೂ ಕಡೆ ಭಾರೀ ಮಟ್ಟದಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯ ಬಳಿಯ ಸನ್ಯಾಲ್ ಹಳ್ಳಿಯ ನರ್ಸರಿಯಲ್ಲಿರುವ ಪ್ರದೇಶದೊಳಗೆ ಉಗ್ರರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ) ಕಾರ್ಯಾಚರಣೆ ಆರಂಭಿಸಿತ್ತು.
ಪೊಲೀಸರು, ಸೇನೆ, ಎನ್ಎಸ್ಜಿ, ಬಿಎಸ್ಎಫ್ ಮತ್ತು ಸಿಆರ್ಪಿಎಫ್ ತಂಡಗಳು ತಾಂತ್ರಿಕ ಮತ್ತು ಕಣ್ಗಾವಲು ಉಪಕರಣಗಳೊಂದಿಗೆ ಹೆಲಿಕಾಪ್ಟರ್, ಯುಎವಿಗಳು, ಡ್ರೋನ್ಗಳು, ಗುಂಡು ನಿರೋಧಕ ವಾಹನಗಳು ಮತ್ತು ಸ್ನಿಫರ್ ನಾಯಿಗಳ ಬೆಂಬಲದೊಂದಿಗೆ ಬೃಹತ್ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಭಯೋತ್ಪಾದಕರು ಶನಿವಾರ ಕಂದರದ ಮಾರ್ಗ ಅಥವಾ ಗಡಿಯಾಚೆಯಿಂದ ಹೊಸದಾಗಿ ರಚಿಸಲಾದ ಸುರಂಗದ ಮೂಲಕ ನುಸುಳಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ಹಿರಾನಗರದಲ್ಲಿ ಎನ್ಕೌಂಟರ್ ನಡೆದ ಸ್ಥಳದ ಬಳಿ ನಾಲ್ಕು ಲೋಡ್ ಮಾಡಿದ ಎಂ 4 ಕಾರ್ಬೈನ್ ಮದ್ದುಗುಂಡುಗಳು, ಎರಡು ಗ್ರೆನೇಡ್ಗಳು, ಬುಲೆಟ್ ಪ್ರೂಫ್ ಜಾಕೆಟ್, ಸ್ಲೀಪಿಂಗ್ ಬ್ಯಾಗ್ಗಳು, ಟ್ರ್ಯಾಕ್ಸೂಟ್ಗಳು, ಹಲವಾರು ಪ್ಯಾಕೆಟ್ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರಿಸಲು ವಸ್ತುಗಳನ್ನು ಹೊಂದಿರುವ ಪ್ರತ್ಯೇಕ ಪಾಲಿಥಿನ್ ಬ್ಯಾಗ್ ಗಳು ಸಿಕ್ಕಿದ್ದವು.
ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಅವರು ಕಥುವಾದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜಮ್ಮು ವಲಯದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಭೀಮ್ ಸೇನ್ ಟುಟಿ ಅವರೊಂದಿಗೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಮುನ್ನಡೆಸಲಾಗಿದೆ.
